ADVERTISEMENT

ಕವನ | ಶಂಕರ್ ಸಿಹಿಮೊಗೆ ಅವರ ‘ದೀಪದ ನೆರಳು’

ಶಂಕರ್ ಸಿಹಿಮೊಗೆ
Published 3 ಡಿಸೆಂಬರ್ 2022, 21:30 IST
Last Updated 3 ಡಿಸೆಂಬರ್ 2022, 21:30 IST
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ
ಸಾಂದರ್ಭಿಕ ಕಲೆಕಲೆ: ವಾಗೀಶ ಹೆಗಡೆ   

ನಾನು‌
ಒಂಟಿ ಬೀದಿಯ
ದೀಪದ ನೆರಳಿನಲ್ಲಿ
ನಡೆಯುತ್ತಿರುವಾಗ ಅವರನ್ನು ಪ್ರೀತಿಸಿದೆ,
ಇಲ್ಲ ಅವರು ಸುಮಧುರವಾಗಿ
ಹಾಡುವುದನ್ನು ಕೇಳಿ ಪ್ರೀತಿಸಿದೆ,
ಆದರೆ ಸುಶ್ರಾವ್ಯ ಕಂಠದಲ್ಲಿದ್ದ ಮಮತೆ
ಅವರ ಹೃದಯದಲ್ಲಿರಲಿಲ್ಲ!

ಅವರು ಪದಕ್ಕೆ ಪದ ಕಟ್ಟಿ
ಸಮುದ್ರಕ್ಕೆ ರೆಕ್ಕೆ ಮೂಡಿ ಹಾರಿದಂತೆ
ಬರೆದ ಕವಿತೆಯ ಕಂಡು ಬೆರಗಾದೆ!
ಆದರೆ ಅಕ್ಷರದಲ್ಲಿದ್ದ ರೂಪಕ
ಅವರ ಮನಸ್ಸಿನಲ್ಲಿರಲಿಲ್ಲ!

ಅವರು ಗೆರೆಗೆ ಗೆರೆ ತಾಕಿಸಿ ಇಳಿಸಿ ಏರಿಸಿ
ಬಿಡಿಸಿದ ಚಿತ್ರಗಳ ಕಂಡು
ಬಣ್ಣಗಳ ವಾಸನೆ ಹೀರುತ್ತಾ ತಬ್ಬಿ ಮುದ್ದಾಡಿದೆ!
ಆದರೆ ರೇಖೆಗಳಲ್ಲಿದ್ದ ಸೊಬಗು
ಅವರ ಆಂತರ್ಯದಲ್ಲಿ ಕಾಣಲಿಲ್ಲ!

ADVERTISEMENT

ಅವರು ಶಿಲೆಯನ್ನು ಉಳಿಯಿಂದ ಕೆತ್ತಿ
ರಂಭೆ ಊರ್ವಶಿ ಮೇನಕೆಯ ವೈಯಾರದ
ಮೈಮಾಟವ ಕಲ್ಲೊಳಗೆ ತುಂಬುವುದ
ಕಂಡು ನಿಬ್ಬೆರಗಾಗಿ ನಿಂತೆ!
ಆದರೆ ಶಿಲೆಯಲ್ಲಿದ್ದ ಶಿಲಾಲತೆಯ ಸೌಂದರ್ಯ
ಅವರ ಮಾತಿನಲ್ಲಿರಲಿಲ್ಲ!

ಅವರ ಹಾಡಿಗೆ ಮತ್ತು ಕವಿತೆಗೆ
ಯಾವುದಾದರು ಸರಿ
ಕೇಳುವ ಕಿವಿ ಮಾತ್ರ ಬೇಕಿತ್ತು!
ಅವರ ಚಿತ್ರಕ್ಕೆ ಮತ್ತು ಶಿಲ್ಪಕ್ಕೆ
ಯಾರದ್ದಾದರು ಸರಿ
ನೋಡುವ ಕಣ್ಣು ಮಿಟುಕಿದರೆ ಸಾಕಿತ್ತು!
ಲೋಕ ಕಂಡಂತೆ
ಅವರು ಅಲ್ಲಿ ಗಾಯಕರಾಗಿದ್ದರು,
ಕವಿಗಳಾಗಿದ್ದರು
ಕಲಾವಿದರಾಗಿದ್ದರು ಮತ್ತು
ಶಿಲ್ಪಿಗಳಾಗಿದ್ದರು!
ಆದರೆ ಅವರು
ಸಾಮಾನ್ಯ ಮನುಷ್ಯರಾಗಿರಲಿಲ್ಲ ಅಷ್ಟೇ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.