ADVERTISEMENT

ಮೌನೇಶ ನವಲಹಳ್ಳಿ ಬರೆದ ಕವಿತೆ: ಯುದ್ಧವಾದಾಗೊಮ್ಮೆ ಬುದ್ಧ ನಿಜವಾಗಿ ಸಾಯಬಹುದು

ಮೌನೇಶ ನವಲಹಳ್ಳಿ
Published 5 ಮಾರ್ಚ್ 2022, 19:30 IST
Last Updated 5 ಮಾರ್ಚ್ 2022, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಇಳೆ ಪಿಸುಗುಡುತ್ತಿರುವಂತೆ
ಇಲಿ ಶ್ವಾನಗಳು ತಳಮಳಿಸುತ್ತವೆ
ಇಲ್ಲಿಗೇನಾದರೂ ಇದಿ ಬಂದೀತೆಂದು
ಇದ್ದಕ್ಕಿದ್ದಂತೆ ಬಾಯ್ದೆರೆದು ನುಂಗಿ ನೀರು ಕುಡಿಯಬಹುದು ಆ ಬೇಗುದಿ
ಇದ್ದಲ್ಲಿಯೇ ಎದೆ ವೇಗ ಹೆಚ್ಚುತ್ತಿದೆ

ದೂರದ ದೇಶದ ರೋಗ
ನನ್ನ ಮನೆಯ ಹೊಸ್ತಿಲು ದಾಟಿ
ನನ್ನ ಮಾತಾಡಿಸಿ
ನನ್ನವರನ್ನೂ ಹೊತ್ತು ಹೋಗಿದೆ ಅದು ಗೊತ್ತೆ ಇದೆ

ಇನ್ನೇನು ಮನೆಯಿಂದ
ಆಚೆ ಬರಬೇಕೆಂದುಕೊಂಡರೆ
ಮತ್ತೆ ನಮ್ಮದೇ ಊರ ಗಲ್ಲಿ ಗಲ್ಲಿಯಲ್ಲೂ
ಜಾತಿ ಭೂತ ಹೊಕ್ಕು ರಕ್ತ ಬೇಡುತ್ತಿದೆ
ಸಮತೆಗಾಗಿ ಸವೆದು ಅಮರವಾದ
ಬೀದಿ ಬದಿಯ ವೃತ್ತದಲ್ಲಿರುವ ಶಿಲ್ಪಗಳೂ ಕಣ್ಣೀರಿಡುತ್ತಿವೆ
ದಾಳಿಗೊಳಗಾಗಿವೆ
ರಾಜರ ಬಂಡವಾಳಿಗರ ಕಲಹಿಗಳ ಸ್ವಹಿತದ ಕುಮ್ಮಕ್ಕಿಗೆ

ADVERTISEMENT

ದೂರದಲ್ಲಿ
ನಮ್ಮ ಮನೆಯ ದೂರದರ್ಶನದಲ್ಲೂ
ಬೆಂಕಿ ಹೊತ್ತಿ ಉರಿಯುತ್ತಿದೆ
ಅದರ ಮೇಲೆ ಬಲಾಬಲದ ಕುದಿವ ಬಾಂಡೆ
ಅದರಲ್ಲಿ ಬೇಯುತ್ತಿರುವವರು ನಮ್ಮಂತ ಸಾಮಾನ್ಯರೇ
ನೆರೆ ಮನೆಯ ಬೆಂಕಿಗೇನು ಕರುಣೆಯೇ
ಯುದ್ಧವಾದಾಗೊಮ್ಮೆ ಬುದ್ಧ ನಿಜವಾಗಿ ಸಾಯಬಹುದು
ಶಾಂತಿ ಅಮರತ್ವಗಳಿಲ್ಲಾ
ಅರಣ್ಯನ್ಯಾಯದಡಿಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.