ADVERTISEMENT

ಸ್ಮಿತಾ ಅಮೃತರಾಜ್ ಅವರ ಕವಿತೆ: ಮೀರಬೇಕು ಒಮ್ಮೆಯಾದರೂ

ಸ್ಮಿತಾ ಅಮೃತರಾಜ್
Published 25 ಫೆಬ್ರುವರಿ 2023, 19:30 IST
Last Updated 25 ಫೆಬ್ರುವರಿ 2023, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ಗೆರೆಯೊಳಗೆ ದುಂಡಗಿನ

ಅಕ್ಷರಗಳನ್ನಿಟ್ಟು ಪದ ಹೊಸೆದರೆ

ಅದೊಂದು ಹೂ ದಂಡೆಯಂತೇ ಕಾಣುತ್ತದೆ

ADVERTISEMENT

ಹೂ ದಂಡೆಯೂ ಜೆಡೆಬಿಲ್ಲೆಯಾಗಲು

ದಾರದ ಗೆರೆಯೊಳಗೇ ಕೂರಬೇಕು

ಗೆರೆ ಗೆರೆ ಕೂತಾಗ ಚೌಕಟ್ಟಾಗುತ್ತದೆ

ಅದರೊಳಗೆ ಒಂದಷ್ಟು ಬಣ್ಣದ ಪುಡಿ

ಎರಚಿದರೆ ರಂಗೋಲಿಯಾಗುತ್ತದೆ

ಚೌಕಟ್ಟಿನೊಳಗೆ ಮಾತ್ರ ಹಬ್ಬಿಕೊಂಡ ಬಳ್ಳಿ

ನೋಡಲು ಎಷ್ಟು ಚೆಂದ?


ಕೆಲವು ಗೆರೆಗಳನ್ನ ಅವರೇ ಎಳೆದು ನಮ್ಮನ್ನ

ಕೂರಿಸಿದ್ದಾರೆ

ಇನ್ನು ಕೆಲವು ಗೆರೆಗಳ ನಾವೇ ಎಳೆದುಕೊಂಡಿದ್ದೇವೆ

ಬದುಕ ಚೆಂದಗಾಣಿಸಲು ಗೆರೆಯೊಂದು ತೀರಾ ಅಗತ್ಯವೆಂಬ ಭ್ರಮೆಯೊಂದು ಬಲಿತಿದೆ

ಗೆರೆಯೊಳಗೇ ಕೂತು ಕಲಿತ

ಅಭ್ಯಾಸ ಬಲ

ಈಗ ಖಾಲಿ ಹಾಳೆಯ ಮೇಲೆಯೂ

ಪದ ಅತ್ತಿತ್ತಲಾಗುವುದಿಲ್ಲ

ಚಿತ್ತ ಚಾಂಚಲ್ಯದಲ್ಲೂ ಗೆರೆ ದಾಟಿ

ಕಣ್ಣು ಕದಲುವುದಿಲ್ಲ


ಈ ಗೆರೆಯಿಂದಾಗಿ ದೊಡ್ಡ ರಾಮಾಯಣವೇ

ಸಂಭವಿಸುತ್ತದೆ ಅಂತ ಗೊತ್ತಿದ್ದರೂ ಇತ್ತಿತ್ತಲಾಗಿ

ಒಮ್ಮೆಯಾದರೂ ಸಣ್ಣಕೆ ಕದಲಿ

ಗೆರೆ ಮೀರಬೇಕು ಅಂತನ್ನಿಸುವುದು

ಯಾಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.