ADVERTISEMENT

ಕೊಡಮೆಗೆ ಬಿದ್ದ ಪ್ರೀತಿ ಮೀನು

ಬಿದಲೋಟ ರಂಗನಾಥ
Published 11 ಮೇ 2019, 20:00 IST
Last Updated 11 ಮೇ 2019, 20:00 IST
ಚಿತ್ರ: ಡಿ.ಕೆ.ರಮೇಶ್‌ 
ಚಿತ್ರ: ಡಿ.ಕೆ.ರಮೇಶ್‌    

ನೀ ಕೊಟ್ಟ ಉಂಗುರವನು ಎಸೆದ
ಆ ಹಾಳು ಬಾವಿಯ ಹುಡುಕುತ್ತಿರುವೆ
ಏಸು ವಸಂತಗಳು ಕಳೆದವು
ಉಂಗುರ ತೊಟ್ಟ ಬೆರಳು ಉಸಿರಾಡಿ
ಭಾವ ಕಡಲನು ಕಡೆದು

ನೆಮ್ಮದಿ ತೊಟ್ಟಿದ್ದ ಮನಸು
ಬೀದಿಯಲಿ ಅಲೆಯುತ್ತಿದೆ
ನಿನ್ನ ಕಣ್ಣ ಭಾವದ ತೊಟ್ಟಿಲನು
ಎದೆಯ ತೀರಿಗೆ ಕಟ್ಟಿಕೊಂಡು

ಎಲ್ಲಿ ಪಾದ ಊರಿದರೂ ಆ ನೆಲದ ಮೇಲೆ
ನೀನಾಡಿದ ಮಾತುಗಳು ಮಗುವಾಗಿ ಕೈ ಚಾಚುತ್ತಿವೆ
ಕನ್ನಡಿಯಾದ ಕನಸುಗಳು ಮೈದಡವುತ್ತಿವೆ
ಕೆಸರಾದ ಬದುಕಲಿ ನಿನ್ನೆಸರ ಹುಡುತ್ತಿರುವೆ

ADVERTISEMENT

ಉರಿಬೇಗೆಯ ನುಂಗಿದ ಕರಿನೆಲ ನೀನು
ಬಿತ್ತುವುದಿತ್ತು ಭಾವ ಬೀಜ
ಮಳೆ ಬಂದು ಕನಸಲಿ
ಕೊಚ್ಚಿಹೋಯಿತು ತೊರೆ ಬಂದು
ಕೊಡಮೆಗೆ ಬಿದ್ದ ಪ್ರೀತಿ ಮೀನು
ಉಸಿರಾಡುತ್ತಿದೆ ಇನ್ನೂ

ಅಲೆವ ಎದೆಗೂಡ ಹಕ್ಕಿಗೆ
ಎಸೆದ ಉಂಗುರದ್ದೇ ಕನಸು
ಎಲ್ಲಂತ ಹುಡುಕಲಿ
ಬತ್ತಿದ ಬಾವಿಯ ಮೇಲೆ
ಮನೆಗಳು ತಲೆ ಎತ್ತಿವೆ
ಎದೆಯ ರಕ್ಕೆಯ ಮುರಿದು
ಕನಸುಗಳ ಪಾಯ ಮಾಡಿಕೊಂಡು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.