ಸಾಲು ಹುಂಚೆಮರಯೆಲ್ಲ ಶಾಮಿಯಾನ
ಗಿಳಿಗುಬ್ಬಿ ಗೊರವಂಕ ನಿಮ್ಮದೇನಾ
ಲೈಟಿನ ಕಂಬಕೆ ಹಬ್ಬಿರೆ ಬಳ್ಳಿ
ನೋಡ್ಯಾವ ಗುಲಗಂಜಿ ಹುಬ್ಬೇರಿ ಹೊಳ್ಳಿ
ಮುತ್ತುಗ ಚೊಂಚಿನ ಮುತ್ತೈದೆಯಾಗಿ
ಹೊತ್ತು ಮುಳುಗುವೊತ್ತು ತೇಲಿ ಮೀನಾಗಿ
ಉಣಕಲ್ಲು ಕೆರೆ ಮ್ಯಾಲೆ ನಿಂತ್ಹಂಗ ಮುಗಿಲು
ಚುಕ್ಕಿಯೆ ಮೂಡಿತ್ತು ನಟ್ಟ ನಡುಹಗಲು
ನೊರೆ ಹೊತ್ತಿ ಉರಿಯಾಲು ಕೆರೆನ್ಯಾಕ ಬೈಲಿ
ಸ್ವರಯೆತ್ತಿ ಕರೆಯಾಲು ಮರವ್ಯಾಕ ಕೊಯ್ಲಿ
ಕೊಳೆತಾಗ ಕೊಳ್ಳಾಗ ತಾಳಿಯೆ ಬಾಗಿನ
ತುಂತುರು ಕಣ್ಣಾಗ ತುಳಕಿದ್ದು ಕಂಡೆ ನಾ
ಹಳ್ಳದ ಒಡಲೆಲ್ಲ ಉಸುಕಾಗಿ ಮಾಯ
ಹಳ್ಳಿಯ ಹುಡುಗರು ಪಟ್ಟಣಕಾಯ
ಸುಗ್ಗಿಯ ತೆನೆಯೆಲ್ಲ ಸುಡುವಂತ ಕಂಟಿ
ಟಿಟ್ಟಿಭ ಅಳುತೀಯ ನೀನ್ಯಾಕ ಒಂಟಿ
ಚಿಗುರೆಲೆ ಬಾಳೆಯ ಚಿತ್ತಾರ ಬಿಡಿಸಿ
ತೊಗರಿಯ ಹೊಲದಾಗ ಕವಳಿಯ ಸೋಸಿ
ಕೊಟ್ಟ ಮಾತಿನ್ಹಂಗ ಇಡುತೀವಿ ಎಡೆಯ
ಮರಿಬ್ಯಾಡ ಮಾತಾಯಿ ನಡೆಸವ್ವ ನುಡಿಯ
ಕೂಸನು ಎಸೆದವರ ಕುನ್ನಿಯ ಮಾಡು
ಕುಂಕುಮ ಅರಿಶಿಣ ಕಾಪಿಟ್ಟು ನೋಡು
ಕೊಟ್ಟರೆ ಕೊಡು ತಾಯಿ ಬೀಜಕ್ಕೆ ಜೀವ
ಕೂತುಂಡು ನೆನೆತೀವಿ ಬೆಳಗಿನ ಜಾವ
ಗಿರಿಗಿಟ್ಲೆ ಹೊಡೆದಾವ ಬೂದು ಕವುಜುಗ
ಮಂದಾಗಿ ಕುಂತಾವ ಕಂದಿದ ಗಿಡುಗ
ಸದ್ದಿಲ್ಲದೆ ಮಲಿಗ್ಯಾವ ಗದ್ದೆಯ ಗೊರವ
ಸಣ್ಣಾಗಿ ಸವೆದಾವ ನಿದ್ದ್ಯಾಗಚಿಟವ
ಊರಾನ ಹುಡುಗ್ಯಾರು ಉಗುರೆತ್ತಿ ತೋರಿ
ಕಾಯುತ್ತ ಕುಂತಾರ ನಿನ್ನಯಾ ದಾರಿ
ಹಾಲುಂಡ ಕೊಕ್ಕರೆ ಹಾಯಿರೆ ಇತ್ತ
ಆಡ್ಯಾಡೊ ಹುಡುಗರು ಕಾದಾರ ಸುತ್ತ
ಹುಯ್ಯೀರಿ ಹುಯ್ಯೀರಿ ಹೂವೊಂದಾ...
ಉಸಿರೆತ್ತಿ ಹಾಡೀರಿ ಹಾಡೊಂದಾ...
***
ರಾಯಚೂರಿನ ಅಸ್ಕಿಹಾಳದವರು. ಓದಿದ್ದು ಪತ್ರಿಕೋದ್ಯಮ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ. ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ(೨೦೧೦),ಜುಲುಮೆ(೨೦೧೪) (ಕವಿತೆ). ಕರ್ನಾಟಕ ಸಂಘ ಶಿವಮೊಗ್ಗದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ(೨೦೧೦), ಡಾ.ಪು.ತಿ.ನ. ಕಾವ್ಯ ನಾಟಕ ಪುರಸ್ಕಾರ (೨೦೧೪), ಮತ್ತು ಬಿಡಿಗವಿತೆಗಳಿಗೆ ಸಂಚಯ, ಸಂಕ್ರಮಣ, ಪ್ರಜಾವಾಣಿಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿವೆ. ಲಯಗಾರಿಕೆಯಿಂದ ಕೂಡಿದ ಇವರ ಕವಿತೆ, ಕಾವ್ಯಾಸಕ್ತರ ಗಮನ ಸೆಳೆದಿವೆ. ಇದಿಮಾಯಿ ಸಂಕಲನ, ಮತ್ತು ರಾಯಚೂರಿನ ದಲಿತ- ಬಂಡಾಯ ಚಳವಳಿಯ ದಿ. ಬೋಳಬಂಡೆಪ್ಪನ ಕುರಿತಾದ ಬದುಕು- ಬರಹಬಂಡಾಯದ ಬೋಳಬಂಡೆಪ್ಪ ಪ್ರಕಟಣೆಗೆ ಸಿದ್ಧಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.