ಶಿವಕುಮಾರ ಸ್ವಾಮೀಜಿ ಬಗ್ಗೆ ಕವಿ ಡಾ.ಸಿದ್ಧಯ್ಯ ಪುರಾಣಿಕ ಅವರ ಕವನ ‘ಅಲ್ಪತನಕಳಿವಿಲ್ಲಿ’
–––
ಕವಿಸಯಮವೆನ್ನುವಿಯ ಸುರನದಿಯ? ಬಾ, ನೋಡು
ಸಿದ್ಧಗಂಗೆಯ ಯೋಗಿವರನ ನಡೆಯ|
ಕಲ್ಪನೆಯು ಎನ್ನುವಿಯ ಸುಧೆಯನ್ನು? ಬಾ, ಕೇಳು
ಶಿವಯೋಗಿ ಪುಂಗವನ ಸವಸಿರಿಯ ನುಡಿಯ|
ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,
ಸರ್ವರನ್ನು ಪ್ರೀತಿಸುವ ದಿವ್ಯಹೃದಯ|
ಗುರಿಯು ಸಕಲರ ಉದಯ, ವರವು ಸರ್ವರಿಗಭಯ.
ಶ್ರೀಮಠವು ಎಲ್ಲರಿಗೆ ನಿತ್ಯಾಶ್ರಯ|
ಏನೆಂಬೆ ಶಿವಕುಮಾರನ ಮೋಡಿ, ಗಾರುಡವ?
ಬರಿಗೈಯೆ ಬೊಕ್ಕಸವು, ನಿಧಿ ನಿಧಾನ!
ಲಕ್ಷ ಕರ ತೆಗೆದರೂ ತುಂಬಿರುವ ಜೋಳಿಗೆಯು
ಕೈಕೊಳುತಲಿದೆ ಪಂಚಪರಷುಗಳ ನಮನ|
ಧರ್ಮದೇರಿಗೆ ಶರಣದರ್ಶನದ ಕಟ್ಟೆಯಿದೆ
ಸಕಲ ಸದ್ಗತಿಯೆಂಬ ಸೋಪಾನವುಂಟು
ವಿದ್ಯೆಕಲೆಗಳ ಜಲದಿ ಅಧ್ಯಾತ್ಮದರವಿಂದ
ಶ್ರೀಮಠದ ಸರಸಿಯಲ್ಲಿ ಸೈಪು ನೂರೆಂಟು|
ಅಲ್ಪತನಕಳಿವಿಲ್ಲಿ| ಜಲ್ಪತನಕಡೆಯೆಲ್ಲಿ?
ಅತ್ಯುಚ್ಚ ಅನುಭಾವಿ ನೆಲೆಸಿರುವನಿಲ್ಲಿ
ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು,
ನಾಡಿನಾಚೆಗು ಶಿವದ ಬೆಳಕು ಚೆಲ್ಲಿ|
–ಡಾ. ಸಿದ್ಧಯ್ಯ ಪುರಾಣಿಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.