ADVERTISEMENT

ಪ್ರಕಾಶ್ ಪುಟ್ಟಪ್ಪ ಅವರ ಕವನ: ‘ಷರಾ ಬರೆದ ಕಣ್ಣುಗಳು'

ಪ್ರಜಾವಾಣಿ ವಿಶೇಷ
Published 20 ಜುಲೈ 2025, 2:09 IST
Last Updated 20 ಜುಲೈ 2025, 2:09 IST
   

ಹಸಿವನ್ನೇ ಅನ್ನ ಮಾಡಿ
ದಣಿವನ್ನೇ ದ್ರವ ಮಾಡಿ
ಆಯಾಸಕ್ಕೆ ಮುಲಾಮು ಹಚ್ಚಿ
ಚಿಲ್ಲರೆಯ ಸದ್ದಿಗೆ ಆಹ್ಲಾದಗೊಳ್ಳತ್ತಾಳೆ
ಯಾರದೋ ತಾಯಿ

ಅವ್ವ ಎಂದಾಗ ಕಿವಿ ಅಗಲಿಸಿ
ಪರದೆಯ ಸರಿಸುತ್ತಾಳೆ
ಉರುಳು ಗಾಲಿಗಳ ಸಂಧಿಯ ಇಣುಕಿ
ಹೊರಟ ಪಾದಗಳ ಅಚ್ಚಿಗೆ ಹರಸಿ
ತೂತು ಬಿದ್ದ ಆಕಾಶದ ಅಳುವಿಗೆ
ತಾನೂ ಜೊತೆಯಾಗುತ್ತಾಳೆ

ನಕ್ಷತ್ರ ಮಿನುಗುತ್ತವೆ
ಚಂದಿರ ಫಲಿಸುತ್ತಾನೆ
ಮುಸ್ಸಂಜೆಗೆ ಮಿಡಿವ ಹಕ್ಕಿಗಳ
ಗೂಡಿನ ತಾಣ ಬಾಗಿಲು ಹಾಕುತ್ತದೆ
ಅವಳು ಕಾಯುತ್ತಲೇ ಇದ್ದಾಳೆ
ಮತ್ತೆ ಮಳೆಗಾಗಿ
ತೋರದಂತೆ ತನ್ನ ಕಣ್ಣ ತೇವಕಾಗಿ

ADVERTISEMENT

ಒಳಗಿನ ಕಣ್ಣು ಬೀಳುವ ಉಲ್ಕೆ
ಹೆಪ್ಪುಗಟ್ಟುವ ಹೃದಯಕ್ಕೆ ಮಂಜಿನ ಕಣ್ಣು
ಅವಳು ಒಂದು ನೆರಳಿಗಾಗಿ
ಒಂದು ಕರುಳಿಗಾಗಿ
ಮತ್ತೆ ಒಂದು ಮಡಿಲಿಗಾಗಿ
ಲೋಕವನೇ ಅಲೆಯುತ್ತಾಳೆ

ಪಾಪಿ ಯಾರು ಜಗದಲಿ
ದೇವರು ಈಗ ಬರೆದಿಡಬೇಕು
ಶಾಯಿ ಮುಗಿದರೇನು
ಅವಳ ಶಾಪ ಕಳೆಯಬೇಕು

ಹೇಳಿ ನೀವೆ? ಯಾರದೋ ತಾಯಿ
ಇಲ್ಲಿ ಯಾಕೆ ಮರುಗುತ್ತಾಳೆ?
ಇಲ್ಲದ ವಾತ್ಸಲ್ಯಕೆ
ದುರ್ಬೀನು ಯಾಕೆ ಹಿಡಿಯುತ್ತಾಳೆ?
ಸತ್ತು ಗೋರಿಕಟ್ಟಿಕೊಂಡ ಊರಿನಲಿ
ಸಾವನೇಕೆ ಹರಸುತ್ತಾಳೆ

ತೂತು ಬಿದ್ದ ಕೈಗಳಲಿ
ಉಂಡು ಹೋದವರೆಷ್ಟೋ
ನನ್ನವರೇ ಎಂದ ಹಸುಳೆಗಳು
ಕೊಂದ ಕ್ರಿಮಿಗಳೆಷ್ಟೋ
ಅವಳು ಗಾಯಗಳನ್ನು ಮುಚ್ಚಿಡುತ್ತಾಳೆ
ಕತ್ತಲೆಯಲಿ ಜಗವ ಮರೆಯುತ್ತಾಳೆ

ಪಾದ ಮೆಟ್ಟಿದ ಧೂಳಿನ ಕಣದಲಿ
ಜಗ ಎಂದೋ ತೊಯ್ಯಬೇಕಿತ್ತು
ಅವಳು ಯಾರದೋ ತಾಯಿ
ಕ್ಷಮಿಸಿ ಬಿಡುತ್ತಾಳೆ
ಅವಳ ಕಣ್ಣುಗಳು ನೋವಿನಲ್ಲಿ
ಷರಾ ಬರೆಯುತ್ತವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.