ADVERTISEMENT

ಸದಾಶಿವ ಸೊರಟೂರು ಅವರ ಕವನ.. ‘ನೆಟ್ಟ ಮೂಳೆಯ ಚಿಗುರು’

ಸದಾಶಿವ ಸೊರಟೂರು ಅವರ ಕವನ

ಸದಾಶಿವ ಸೊರಟೂರು
Published 14 ಜೂನ್ 2025, 21:16 IST
Last Updated 14 ಜೂನ್ 2025, 21:16 IST
   

ಉರಿದು ಉಳಿದ ಮೂಳೆ
ಉರಿಸಿ ಉಳಿದ ಮರದ ಕೊರಡು
ಸಾಧ್ಯವಾದರೆ
ನೆಟ್ಟು ಬಿಡಿ
ಅಲ್ಲೇ ಮಸಣದ ಒಂದು ಬದಿ..


ಹೆಗಲ‌ ಮೇಲೆ ಯಾತ್ರೆ ಬರುವಾಗ
ಹೂ ಎಸೆದಿದ್ದರು
ಕೆಲವರು
ತಮ್ಮ ಶಾಪದಲ್ಲಿ ಅದ್ದಿಕೊಂಡು,
ದಾರಿಯಲ್ಲೇ ತೊಳೆದುಕೊಂಡಿದ್ದರು
ಹಲವರು
ಮೈಲಿಗೆ,
ತಮ್ಮ ತಮ್ಮ ಕಣ್ಣೀರು
ಸುರಿಸಿಕೊಂಡು..


ನಾಲ್ಕು ಹೂವು
ಬೊಗಸೆ ದುಃಖ ಸುರಿಯಿರಿ
ನೆಟ್ಟ ಮೂಳೆಗೆ
ಊರಿದ ಮರದ ಕೊರಡಿಗೆ..

ADVERTISEMENT


ಕಣ್ಣೀರಿಗೆ
ಕೊನರುವುದಿಲ್ಲ 
ಯಾವ ಉರಿದ ಕೊರಡೂ


ಉರಿದು ಉಳಿದ ನನ್ನ ಮೂಳೆ
ತುಂಡು
ಮೊಳೆತರೆ ಅಚ್ಚರಿ ಪಡಬೇಡಿ..


ನಾಳೆ ನೀವು ಇಲ್ಲೇ
ಮಲಗುವಿರಲ್ಲ.. ಮಸಣದಲಿ
ಬಿಸಿಲು ಹಾಸಿಕೊಂಡು
ಚೂರು ನೆರಳು ಹಾಸುವೆ ನಿಮಗೆ
ಬೇಸರಿಸಿಕೊಳ್ಳಬೇಡಿ.. 

***

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.