ADVERTISEMENT

ದೊಡ್ಡಿ ಶೇಖರ ಅವರ ಕವಿತೆ; ‘ಬಸ್ಸಿನ ಹವೆಯಲ್ಲಿ ಈಜುತ್ತಿದ್ದಾಗ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 22:34 IST
Last Updated 24 ಜನವರಿ 2026, 22:34 IST
ಆನವಟ್ಟಿ ಸಮೀಪದ ಕಾನಕೊಪ್ಪ ಹೊಸೂರು ಬಳಿಯ ಕೆರೆಯಲ್ಲಿ ಬಿದ್ದಿರುವ ಕಾರು, ರಾಮಚಂದ್ರ ಅವರನ್ನು ಶೋಧ ಮಾಡುತ್ತಿರುವ ಈಜು ತಜ್ಞರು
ಆನವಟ್ಟಿ ಸಮೀಪದ ಕಾನಕೊಪ್ಪ ಹೊಸೂರು ಬಳಿಯ ಕೆರೆಯಲ್ಲಿ ಬಿದ್ದಿರುವ ಕಾರು, ರಾಮಚಂದ್ರ ಅವರನ್ನು ಶೋಧ ಮಾಡುತ್ತಿರುವ ಈಜು ತಜ್ಞರು   

ದೊಡ್ಡಿಶೇಖರ

ಹುಲಿಯನಾಗಲು ಹೊರಟು
ಬಸ್ಸಿನ ಹವೆಯಲ್ಲಿ ಈಜುತ್ತಿದ್ದಾಗ
ಮೊಬೈಲ್ ಗಾಳದಲ್ಲಿ ಸಿಕ್ಕಿಬಿದ್ದು
ಶವದ ಸುದ್ದಿಯ ಮುಳ್ಳು ಚುಚ್ಚಿ
ಬೇಸರದ ಕಲೆ ಕದಡಿ ಹರಿಯಿತು

ಬೈಕಿನಲ್ಲಿ ಅಡ್ಡಾಡುತ್ತಿದ್ದವ ಬ್ಯಾನರಿನಲ್ಲಿ ನಿಂತಿದ್ದ
ಬೊಂಬಾಟ್ ಬಾಯ್ಸ್ ಶ್ರದ್ಧಾಂಜಲಿ ಸಲ್ಲಿಸಿತ್ತು
ಲೈಟ್ ಕಂಬಕ್ಕೆ ಬಿಗಿದ ಚಿತ್ರದ ದೀಪಗಳು ಉರಿಯುತ್ತಾ
ನೂರಾರು ಬಾಯಲ್ಲಿ ಕಥನವಾಗಿ, ಹತ್ತಾರು ಕಣ್ಣಲ್ಲಿ ನೀರಾಗಿ
ಕಾಡಿ ಕದಲೊಲ್ಲದೆ ಕೈಕಟ್ಟಿ ಮಲಗಿದ್ದಾನೆ ಕಾಟಿನ ತುಂಬ
ಕಣ್ಣು ಬಿಟ್ಟಿದ್ದರೆ ಆಕಳಿಸುವನು ಎದ್ದು ಕೂರುವನು ಎಂಬಂತೆ

ADVERTISEMENT

ಹೊರವಾಗಿ ಬೆಳೆದ ಕಪ್ಪಹಸಿರು ಗುಂಗುರು ಗಡ್ಡ ಮೀಸೆ
ಮೈಮನದ ಒಳಾಸೆಗೆ ಭಾಷೆಯ ಚಿತ್ರಲಿಪಿಯಾಗಿತ್ತು
ತುತ್ತು ನೀಡುವ ಹೊತ್ತಾಗಿತ್ತು ಹೆತ್ತವರಿಗೆ ಆಸೆ ಪಸೆಗಟ್ಟಿ
ಕಿಡಿಕಾಣದ ಅಕ್ಷರದ ಮಣಿಸರವ ಎಂದೋ ಕಿತ್ತೊದರಿದ್ದ
ಕಾಸಿನ ಮರಿನಾಯಿಯ ಹಿಡಿದು ಹುಲಿಯನಾಗಲು ಹೊರಟಿದ್ದ

ನಾಯಿ ಮೂಗೊಳ್ಳೆ ಬಿರಿಯುವುದು ಶುರುವಾದಂತೆ
ಮೂಳೆಯ ಚೈನಿನಲ್ಲೇ ಹಗಲು ರಾತ್ರಿಯ ಕೂಡಿಕಟ್ಟುವುದು
ಹುಲಿ ವೇಷದ ಅವತಾರಕ್ಕೆ ಅಮಲು ನೊರೆಗರೆವ ಬಾಟಲು
ತುಂಡು ಗುಂಡಿನಲ್ಲೇ ಜೀವನದ ಸರ್ವಸ್ವ ಕಥನ ಕಾರ ಕಡೆದಿತ್ತು
ರುಚಿಯೇ ದಾರಿ ಮಜವೇ ಗುರಿ ಸೂತ್ರದಲ್ಲಿ ಸಿಕ್ಕಿದ ನಟನಾಗಿ
ಆಡುತ್ತಾ ಆಡುತ್ತಾ ಮೈದಾಳಿದ ತರೇಹವಾರಿ ಘಟಕ್ಕೆ
ಡೇರೆಗೆ ನುಗ್ಗಿದ ಒಂಟೆಯಂತೆ ಎತ್ತಿದ್ದೇನು ತೋರಿದ್ದೇನು
ಹುಣ್ಣು ಹುಣ್ಣು ಕಣ್ಣು ಕರುಳಿಲ್ಲದ ಹುಣ್ಣು ಅವ್ವ ಅಪ್ಪನಾಗಿ
ಕೆರಳಿ ನರಳಿ ಅತ್ತು ಸತ್ತವರು ಮಾತು ಬಿಟ್ಟು ಮುದುಡಿದರು

***