ADVERTISEMENT

ಬಿ.ಆರ್.ಲಕ್ಷ್ಮಣರಾವ್ ಅವರ ಕವಿತೆ: ಹೀಗೂ ಒಮ್ಮೊಮ್ಮೆ..

ಬಿ.ಆರ್.ಲಕ್ಷ್ಮಣರಾವ್
Published 7 ಮೇ 2022, 20:15 IST
Last Updated 7 ಮೇ 2022, 20:15 IST
ಸಾಂದರ್ಭಿಕ ಕಲೆ: ಮುರಳೀಧರ ರಾಠೋಡ್‌
ಸಾಂದರ್ಭಿಕ ಕಲೆ: ಮುರಳೀಧರ ರಾಠೋಡ್‌   

ಹಾದುಹೋದೆ ಹೀಗೇ ಯಾವುದೋ ಕೆಲಸದ ಮೇಲೆ
ನಗರದ ಕಿಕ್ಕಿರಿದೊಂದು ಓಣಿಯಲ್ಲಿ.
ಬಾರೊಂದರ ಬದಿಯ ಪೆಟ್ಟಿಗೆಯಂಗಡಿಯಲ್ಲಿ ಕೇಳಿದೆ
ಒಂದು ಪ್ಯಾಕ್‌ ಸಿಗರೇಟಿಗಾಗಿ.

ದುಡ್ಡೇನೊ ಕೊಟ್ಟೆ, ಆದರೆ ಧಾವಂತದಲ್ಲಿ
ಪ್ಯಾಕ್ ಇಸಿದುಕೊಳ್ಳಲು ಮರೆತುಬಿಟ್ಟೆ.
ಅದು ನೆನಪಾದದ್ದು ಮನೆಗೆ ಹಿಂತಿರುಗಿದ ಮೇಲೆ
ಸಂಜೆ ಸಿಗರೇಟಿನ ವೇಳೆಗೆ.

ನನ್ನ ಮರೆಗುಳಿತನಕ್ಕೆ ನನ್ನನ್ನೇ ಹಳಿದುಕೊಂಡೆ.
ಹೋದರೆ ಹೋಯ್ತು, ಸಣ್ಣ ಮೊತ್ತ.
ಹತ್ತಿರದ ಅಂಗಡಿಗೆ ಹೋಗಿ ಸಿಗರೇಟು ಕೊಂಡುತಂದೆ.
ಅದನ್ನು ಬಿಡಲಿಕ್ಕಾಗುತ್ತಾ?

ADVERTISEMENT

ಮರುದಿನ, ನೋಡೋಣವೆಂದು ಅದೇ ಆ ಓಣಿಯಲ್ಲಿ
ಹಾದುಹೋದೆ, ಕೆಲಸವಿರದಿದ್ದರೂ.
ಅದೇ ಪೆಟ್ಟಿಗೆಯಂಗಡಿಯ ಅದೇ ಗೊತ್ತಿರದ ಹುಡುಗ
ತಾನೇ ಕರೆದ, ‘ಸಾರ್, ಬನ್ನಿ’ ಎಂದು.

‘ಮರೆತುಬಿಟ್ರಾ?’ ನಕ್ಕ, ಪ್ಯಾಕ್ ಎತ್ತಿಕೊಟ್ಟ,
ಉಳಿದ ಚಿಲ್ಲರೆಯ ಜೊತೆಗೆ.
‘ಥ್ಯಾಂಕ್ಸ್’ ಎಂದು ಕೈ ಕುಲುಕಿ ಹಿಂತಿರುಗಿದೆ,
ಅಂದು ಗೆಲುವಾಗಿತ್ತು ಮನಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.