ADVERTISEMENT

ಅತಿ ತರ್ಕ ಒಳ್ಳೆಯದಲ್ಲ

ಪಶ್ಚಿಮದ ಅರಿವು /ಹಾರಿತಾನಂದ
Published 22 ಫೆಬ್ರುವರಿ 2019, 19:45 IST
Last Updated 22 ಫೆಬ್ರುವರಿ 2019, 19:45 IST
   

ಒಂದೂರಿನಲ್ಲಿ ಒಬ್ಬಳು ಅಜ್ಜಿ; ಅವಳಲ್ಲಿ ಒಂದು ಕೋಳಿ ಇತ್ತು. ಅದು ದಿನವೂ ಒಂದು ಮೊಟ್ಟೆಯನ್ನು ಇಡುತ್ತಿತ್ತು. ಒಂದು ದಿನ ಆ ಮುದುಕಿ ಹೀಗೆ ಯೋಚಿಸಿದಳು: ‘ಈ ಕೋಳಿಗೆ ಜಾಸ್ತಿ ಆಹಾರವನ್ನು ಹಾಕಿ ಮತ್ತಷ್ಟು ಕೊಬ್ಬಿಸಿದರೆ ಆಗ ಅದು ಹೆಚ್ಚೆಚ್ಚು ಮೊಟ್ಟೆಗಳನ್ನು ಇಡಬಹುದು’.

ಅವಳು ಹಾಗೆಯೇ ಮಾಡಿದಳು. ಹೆಚ್ಚೆಚ್ಚು ಆಹಾರವನ್ನು ತಿನ್ನತೊಡಗಿದ ಆ ಕೋಳಿ ಕೊಬ್ಬುತ್ತ ಬೆಳೆಯಿತು; ತಿಂದೂ ತಿಂದೂ ಅದು ದಪ್ಪವಾದದ್ದೇ ಲಾಭವಾಯಿತು. ಏಕೆಂದರೆ ಅದು ಮೊಟ್ಟೆ ಇಡುವುದನ್ನೇ ನಿಲ್ಲಿಸಿಬಿಟ್ಟಿತು.

* * *

ADVERTISEMENT

ಇದು ಈಸೋಪನ ಕಥೆಗಳಲ್ಲಿ ಒಂದು. ಈ ಕಥೆಯು ಹಲವು ರೀತಿಯ ಸಂದೇಶಗಳನ್ನು ಕೊಡುತ್ತಿದೆ.

ಮೊದಲನೆಯದು: ಅತಿಯಾಸೆ ಒಳ್ಳೆಯದಲ್ಲ. ಮುದುಕಿ ಒಂದೇ ದಿನ ಹತ್ತಾರು ಮೊಟ್ಟೆಗಳನ್ನು ಪಡೆಯಬಹುದು ಎಂಬ ಅತಿಯಾದ ಆಸೆ ಪಟ್ಟಳು. ಈ ಕಾರಣದಿಂದ ಸಿಗುತ್ತಿದ್ದ ಮೊಟ್ಟೆಯನ್ನೂ ಅವಳು ಕಳೆದುಕೊಂಡಳು.

ಎರಡನೆಯದು: ನಮ್ಮ ನಿತ್ಯದ ಆಗುಹೋಗುಗಳಲ್ಲಿ ಗೊತ್ತಾದ ಕ್ರಮವೊಂದಿರುತ್ತದೆ. ಅವು ನಮ್ಮ ಯೋಜನೆಯಂತೆಯೋ ಯೋಚನೆ ಯಂತೆಯೋ ಅವು ನಡೆಯವು. ಹೀಗಾಗಿ ಒಂದೊಂದು ಕ್ರಿಯೆಗೂ ಹಿನ್ನೆಲೆಯಲ್ಲಿರುವ ಕಾರಣವನ್ನು ತಿಳಿದು ಅದಕ್ಕೆ ತಕ್ಕಂತೆ ನಮ್ಮ ಯೋಜನೆಯನ್ನು ರೂಪಿಸಿಕೊಂಡರೆ ಮಾತ್ರ ನಮಗೆ ಫಲ ಸಿಗುತ್ತದೆ. ಕಾರ್ಯ–ಕಾರಣ ಸಂಬಂಧವನ್ನು ತಿಳಿದು ಅದರಂತೆ ನಮ್ಮ ಜೀವನವಿಧಾನವನ್ನು ರೂಪಿಸಿಕೊಂಡರೆ ಮಾತ್ರ ನಮಗೆ ಫಲ ಸಿಗುತ್ತದೆ. ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ; ಆದರೆ ಅದನ್ನು ಮೇಲ್ಮುಖವಾಗಿ ಹರಿಸಬೇಕಾದರೆ ನಾವು ಬೇರೆಯೇ ಕ್ರಮದಲ್ಲಿ ಸಾಧನೆ ಮಾಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.