
ಕಾರ್ಣಿಕ
ಏಳುಕೋಟಿ ಮೈಲಾರ ಲಿಂಗೇಶ್ವರ ದೇವರ ಪೂಜೆ ಮತ್ತು ಆಚರಣೆ ರಾಜ್ಯ ಮಾತ್ರವಲ್ಲದೇ ಪಕ್ಕದ ರಾಜ್ಯಗಳಿಗೂ ಪಸರಿಸಿದೆ. ಈ ದೇವರ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಕಾರ್ಣಿಕದ ಗೊರವಯ್ಯರ ಪಾತ್ರ ಬಹುಮುಖ್ಯವಾಗಿದೆ.
ರಾಜ್ಯದಲ್ಲಿ ಧಾರವಾಡ ಜಿಲ್ಲೆಯ ದೇವರ ಗುಡ್ಡ (ಕಲ್ಲು ಮೈಲಾರ) ಮತ್ತು ಬಳ್ಳಾರಿ ಜಿಲ್ಲೆಯ ಮಣ್ಣ ಮೈಲಾರ ಈ ಎರಡು ಕ್ಷೇತ್ರಗಳಲ್ಲಿನ ಕಾರ್ಣಿಕ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿರುವ ಮೈಲಾರ ಲಿಂಗೇಶ್ವರ ದೇವರಿಗೆ ಲಕ್ಷಾಂತರ ಜನ ಭಕ್ತರಿದ್ದಾರೆ. ಈ ಕ್ಷೇತ್ರಗಳಿಗೆ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ.
ಉಳಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಮೈಲಾರ ಲಿಂಗೇಶ್ವರ ದೇವಾಲಯಗಳಿದ್ದು ಅಲ್ಲಿಯೂ ಸ್ಥಳೀಯ ಆಚರಣೆಗೆ ಅನುಗುಣವಾಗಿ ಜಾತ್ರೆ ಸಂದರ್ಭಗಳಲ್ಲಿ ಕಾರ್ಣಿಕ ನಡೆಯುತ್ತದೆ. ದಸರಾ ಹಾಗೂ ಶಿವರಾತ್ರಿ ಸಮಯದಲ್ಲಿ ಜಾತ್ರೆಗಳು ನಡೆಯುವುದು ರೂಡಿ.
ಗೊರವರು ಧರಿಸುವ ಉಡುಪು ವೈವಿಧ್ಯಮಯವಾಗಿದೆ. ತಲೆ ರುಮಾಲಿನ ಮೇಲೆ ಕರಡಿ ಚರ್ಮ, ಬಿಳಿ ಅಥವಾ ಹಳದಿ ಬಣ್ಣದ ಕಚ್ಚೆ ಧರಿಸುತ್ತಾರೆ. ತುಂಬು ತೋಳಿನ ಜುಬ್ಬ ಧರಿಸಿ, ಬಲಗೈಯಲ್ಲಿ ಢಮರುಗ ಹಿಡಿದಿರುತ್ತಾರೆ. ಎಡಗೈಯಲ್ಲಿ ನಾಗಬೆತ್ತ ಹಿಡಿದು, ಹಣೆಗೆ ವಿಭೂತಿ ಹಚ್ಚಿ, ಕಣ್ಣಿನ ಸುತ್ತ ಬಿಳಿ ಮತ್ತು ಕೆಂಪು ವರ್ಣದ ವೃತ್ತಗಳನ್ನು ಬಳಿದುಕೊಳ್ಳುತ್ತಾರೆ.
ಗೊರವಯ್ಯನಾಗಲು ದೀಕ್ಷೆ ಪಡೆಯಬೇಕು, ದೀಕ್ಷೆ ಪಡೆದ ಮೇಲೆ ಕಟ್ಟುನಿಟ್ಟಾಗಿ ಇರಬೇಕು. ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಎದುರು ಬದುರು ಕೂತು ಊಟ ಮಾಡಬಾರದು, ಬರಿಗಾಲಲ್ಲಿ ನೃತ್ಯ ಮಾಡಬೇಕು ಎಂದು ದೀಕ್ಷೆ ಪಡೆದ ಗೊರವರು ಹೇಳುತ್ತಾರೆ.
ಕಾರ್ಣಿಕದ ದಿನ ಭಕ್ತರ ಸಮೂಹದ ಮಧ್ಯೆ ತುಪ್ಪ ಅಥವಾ ಎಣ್ಣೆ ಸವರಿದ 20 ಅಡಿ ಎತ್ತರದ (ಎತ್ತರದಲ್ಲಿ ವ್ಯತ್ಯಾಸ ಇರುತ್ತದೆ) ಐತಿಹಾಸಿಕ ಬಿಲ್ಲನ್ನೇರಿದ ಗೊರವಯ್ಯ ದಶ ದಿಕ್ಕುಗಳತ್ತ ನೋಡುತ್ತ ಸದ್ದಲೇ.. ಎಂದು ಕೂಗಿದ ಕೂಡಲೇ ನೆರೆದಿದ್ದ ಭಕ್ತರು ಕ್ಷಣ ಕಾಲ ಮೌನರಾಗುತ್ತಾರೆ. ಆಗ ಗೊರವಯ್ಯ ಭವಿಷ್ಯ ವಾಣಿ ನುಡಿಯುತ್ತಾರೆ.
ಸಾಮಾನ್ಯವಾಗಿ ಕಾರ್ಣಿಕದಲ್ಲಿ ಮಳೆ, ಬೆಳೆ, ವಾಣಿಜ್ಯ, ರಾಜಕೀಯ ಕ್ಷೇತ್ರದ ಬಗ್ಗೆ ಭವಿಷ್ಯ ವಾಣಿ ನುಡಿಯಲಾಗುತ್ತದೆ. ಈ ಕಾರ್ಣಿಕದ ಭವಿಷ್ಯವಾಣಿಯನ್ನು ದೇವಾಲಯದ ಎದುರು ವಿಶ್ಲೇಷಣೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.