ಗಣೇಶ ಚತುರ್ಥಿಯಂದು ಗಣೇಶನನ್ನು ಎಲ್ಲೆಡೆ ಪೂಜಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಗಣೇಶನನ್ನು ಕರೆತರುವುದರಿಂದ ವಿಸರ್ಜನೆ ಮಾಡುವ ವರೆಗೆ ಹಲವು ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಗಣೇಶನ ಪ್ರತಿಷ್ಠಾಪನೆಯ ಸಮಯ, ಗಣೇಶನನ್ನು ತರುವ ಬಗೆ ಹಾಗೂ ವಿಸರ್ಜನೆ ಮಾಡುವ ಸಮಯದ ಕುರಿತು ಮಾಹಿತಿ ಇಲ್ಲಿದೆ.
ಧಾರ್ಮಿಕ ವಿಚಾರ:
ಆ.27 ರಂದು ಬುಧವಾರ ಚತುರ್ಥಿ ತಿಥಿ:ಘಟಕ:18:27 (ಹಗಲು 01:37ರವರೆಗೆ) ಶ್ರೀ ವರ ಸಿದ್ಧಿ ವಿನಾಯಕ ವ್ರತವನ್ನುಆಚರಿಸಲಾಗುತ್ತದೆ. ಅದಕ್ಕೂ ಮುಂಚೆ ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರುವಾಗ ಈ ಕೆಳಗಿನ ಅಂಶಗಳನ್ನು ಪಾಲಿಸಬೇಕು. ಅವುಗಳೆಂದರೆ,
ಶ್ರೀ ಗಣೇಶ ಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು.
ಮೂರ್ತಿಯನ್ನು ಕೈಯಲ್ಲಿ ತೆಗೆದುಕೊಳ್ಳುವವರು ಹಿಂದೂ ವೇಷ ಭೂಷಣವನ್ನು ಧರಿಸಿರಬೇಕು.
ಮೂರ್ತಿಯನ್ನು ತರುವಾಗ ಅದರ ಮೇಲೆ ರೇಷ್ಮೆ, ಹತ್ತಿ (ನೂಲಿನ) ಅಥವಾ ಖಾದಿಯ ಸ್ವಚ್ಛ ಬಟ್ಟೆಯನ್ನು ಹಾಕಬೇಕು. ಮೂರ್ತಿಯ ಮುಖವು ತರುವವನ ಕಡೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು. ಮೂರ್ತಿಯ ಮುಂಭಾಗದಿಂದ ಸುಗುಣ ತತ್ವ ಮತ್ತು ಹಿಂಭಾಗದಿಂದ ನಿರ್ಗುಣ ತತ್ವ ಪ್ರಕ್ಷೇಪಿಸಿರುತ್ತದೆ.
ಶ್ರೀ ಗಣೇಶನಿಗೆ ಜಯಕಾರ ಮತ್ತು ಅವನ ನಾಮ ಜಪ ಮಾಡುತ್ತ ಮೂರ್ತಿಯನ್ನು ಮನೆಗೆ ತರಬೇಕು.
ಮನೆಯ ಹೊಸ್ತಿಲಲ್ಲಿ ಮೂರ್ತಿಯನ್ನು ತರುವವರ ಕಾಲನ್ನು ಮನೆಯ ಮುತ್ತೈದೆ ತೊಳೆಯಬೇಕು. ನಂತರ ಒಳಕ್ಕೆ ಬರಮಾಡಿಕೊಳ್ಳಬೇಕು
ಮನೆಯನ್ನು ಪ್ರವೇಶಿಸುವ ಮೊದಲು ಮೂರ್ತಿಯ ಮುಖವನ್ನು ಮುಂದಿನ ಬದಿಗೆ ಮಾಡಬೇಕು ನಂತರ ಮೂರ್ತಿಗೆ ಆರತಿ ಬೆಳಗಬೇಕು.
ಮನೆಯಲ್ಲಿ ಯಾವ ಸ್ಥಳದಲ್ಲಿ ನೀವು ವಿನಾಯಕನನ್ನು ಇಟ್ಟು ಪೂಜಿಸುತ್ತಿರೋ ಆ ಸ್ಥಳದಲ್ಲಿ ಮಣೆಯನ್ನು ಹಾಕಿ ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಇಟ್ಟು ಅಕ್ಕಿಯ ಮೇಲೆ ಮೂರ್ತಿಯನ್ನು ಕೂರಿಸಬೇಕು.
ಗಣೇಶ ಚತುರ್ಥಿಯ ದಿನದಂದು ಶ್ರೀ ಗಣೇಶನಿಗೆ ಅಲಂಕಾರ ಮಾಡಿ ಪೂಜಿಸಬೇಕು. ಗಣೇಶನಿಗೆ ಶ್ರದ್ಧೆಯಿಂದ ವ್ರತವನ್ನು ಆಚರಿಸಬೇಕು.
ಗೌರಿ ಗಣಪತಿಗಳನ್ನು ಕಳಿಸಲು ಶುಭಮುಹೂರ್ತ:
ಸೆ. 05 ರ ಶುಕ್ರವಾರ ದಂದು ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿ ತಿಥಿ: ಶ್ರಾವಣ ನಕ್ಷತ್ರದ ದಿನ ರಾತ್ರಿ 7 ರಿಂದ ರಿಂದ 9 ರವರೆಗೆ ಗೌರಿ ಮತ್ತು ಗಣಪತಿಯನ್ನು ವಿಸರ್ಜನೆ ಮಾಡಬಹುದು. ಕೇವಲ ಗಣಪತಿ ಹಬ್ಬ ಆಚರಿಸುವವರು ಹಬ್ಬವಾದ ಮಾರನೆಯ ದಿನ ಗಣೇಶನ ವಿಸರ್ಜನೆಯನ್ನು ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.