ಕ್ಯಾಲೆಂಡರ್ ವರ್ಷದ ಮೊದಲನೇ ತಿಂಗಳಿನ ಹಾಳೆ ಮಡಚಿದೆ. ಆರ್ಥಿಕ ಹೊಸ ವರ್ಷ (ಏಪ್ರಿಲ್)ದ ಆರಂಭದ ಹಾಳೆಗೆ ಎರಡೇ ತಿಂಗಳು ಬಾಕಿಯಿದೆ! ಜಾಗತೀಕರಣದಿಂದಾಗಿ ಈಗ ಇಡೀ ವಿಶ್ವವೇ ಒಂದು ಗ್ರಾಮವಾಗಿ ಮಾರ್ಪಟ್ಟಿದೆ.
ದೂರದ ಯೂರೋಪ್ ದೇಶಗಳ ಬಿಕ್ಕಟ್ಟು ನಮ್ಮೂರ ಹೋಟೆಲ್ ಹಾಗೂ ತರಕಾರಿ ಅಂಗಡಿಗಳ ಮೇಲೂ ಪರಿಣಾಮ ಬೀರುತ್ತಿದೆ. ಆರ್ಥಿಕ ತಜ್ಞರೂ ಆಗಿರುವ ಪ್ರಧಾನಿ ಮನಮೋಹನಸಿಂಗ್ ಅವರು ಎಷ್ಟೇ ಕೊಸರಿದರೂ ದೇಶದ ಹಣಕಾಸಿನ ಪರಿಸ್ಥಿತಿ ಮಾತ್ರ ಸುಧಾರಿಸಲು ಹಿಂದೇಟು ಹಾಕುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ನಮ್ಮ ಹಣ ಸಂರಕ್ಷಿಸಿಕೊಳ್ಳುವುದು ಹೇಗೆ?
ಈ ಕೆಳಗಿನ ಐದು ಸರಳ ಸೂತ್ರಗಳು ನಮಗೆ ಆರ್ಥಿಕ ಸಮಾಧಾನ ತಂದುಕೊಡಬಲ್ಲವು.
ಮನೆ ಸಾಲ ಹತೋಟಿಯಲ್ಲಿ ಇರಲಿ
ಈಗ ಗಗನಮುಖಿಯಾಗಿರುವ ಭೂಮಿಯ ಬೆಲೆ ಗಮನಿಸಿದರೆ ಕೂಡಿಟ್ಟ ಹಣದಲ್ಲಿ ಆಸ್ತಿ ಮಾಡುವುದು ಅಸಾಧ್ಯ ಎಂಬ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಮನೆ ಅಥವಾ ಭೂಮಿ ಖರೀದಿ ಮಾಡಲು ಸಾಲ ಅನಿವಾರ್ಯ. ಯಾವುದೇ ಸಾಲ ಪಡೆಯುವುದಕ್ಕಿಂತಲೂ ಮನೆಸಾಲ ಪಡೆಯುವುದು ಈಗ ಹಿಂದೆಂದಿಗಿಂತಲೂ ಸುಲಭ.
ಆದರೆ, ಸಾಲ ಧಾರಾಳವಾಗಿ ಸಿಗುತ್ತದೆ ಎಂಬ ಮಾತ್ರಕ್ಕೆ ನಮ್ಮ ಶಕ್ತಿಗೂ ಮೀರಿ ಸಾಲ ಮಾಡಿದರೆ ಭವಿಷ್ಯದಲ್ಲಿ ಸಾಲದ ಮಾಸಿಕ ಕಂತು (ಇಎಂಐ) ಕಟ್ಟುವುದೇ ದುಸ್ತರವಾದೀತು. ಬ್ಯಾಂಕಿನ ಸಾಲ ನೀಡಿಕೆಯ ನಿಯಮಗಳ ಪ್ರಕಾರ ವ್ಯಕ್ತಿಯೊಬ್ಬನ ಪ್ರಸಕ್ತ ಆದಾಯದ ಶೇ 50 ರಷ್ಟು ಮೌಲ್ಯದ ಸಾಲ ಪಡೆಯಬಹುದು.
ಆದರೆ, ಸಾಲ ಪಡೆಯುವಲ್ಲಿ ನೀವೇ ಮಿತಿ ಹಾಕಿಕೊಂಡು ಶೇ 40ರ ಗಡಿ ದಾಟದಿದ್ದರೆ ನಿಮಗೇ ಒಳ್ಳೆಯದು. ಉದಾಹರಣೆಗೆ, ನಿಮಗೆ ್ಙ 20 ಸಾವಿರ ಮಾಸಿಕ ಆದಾಯವಿದ್ದರೆ ನೀವು ್ಙ10 ಲಕ್ಷ ಸಾಲ ಪಡೆಯಲು ಅರ್ಹರು. ಆದರೆ, ನೀವೇ ಈ ಸಾಲದ ಮಿತಿಯನ್ನು ್ಙ8 ಲಕ್ಷ ಗಳಿಗೆ ನಿಗದಿಪಡಿಸಿಕೊಂಡರೆ ಆರ್ಥಿಕ ಸಂಕಷ್ಟದ ಸಮಯದಲ್ಲಿ ಹೊರೆಯನಿಸದು.
ಅನಗತ್ಯ ವೆಚ್ಚಕ್ಕೆ ಕಡಿವಾಣ
ನಾವು ಮಾಡುವ ಸಾಲ ರಚನಾತ್ಮಕವಾಗಿರಬೇಕು ಎಂಬ ಭಾವನೆ ಇರಬೇಕು. ಉದಾಹರಣೆಗೆ, ಮನೆ ಖರೀದಿಸಲು ಮಾಡುವ ಸಾಲ ಆಸ್ತಿಯೊಂದಕ್ಕೆ ಮಾಡಿದ ಸಾಲವಾದ್ದರಿಂದ ಯಾವಾಗಲೂ ಅದಕ್ಕೆ ಬೆಲೆ ಇದ್ದೆೀ ಇರುತ್ತದೆ. ಅಷ್ಟೇ ಅಲ್ಲ.
ಆದಾಯ ತೆರಿಗೆ ವಿನಾಯ್ತಿಯೂ ಇರುತ್ತದೆ. ಆದರೆ, ಪ್ರವಾಸಕ್ಕಾಗಿ, ಕಾರು-ಬೈಕು ಕೊಳ್ಳಲು ಮಾಡಿದ ಸಾಲ. ಇವುಗಳಿಂದ ನಾವು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು! ಅತಿ ಅಗತ್ಯವೆನಿಸಿದರೆ ವಾಹನಗಳ ಸಾಲ ಮಾಡಬಹುದು. ಆದರೆ, ಈ ಸಾಲದ ಅವಧಿ ಕಡಿಮೆಯಿದ್ದಷ್ಟೂ ನಿಮಗೆ ಜೇಬಿಗೆ ಒಳ್ಳೆಯದು.
ಸಾಲ ತೀರ ವೈಯಕ್ತಿಕವಾಗದಿರಲಿ
ಸಾಲ ಎಷ್ಟು ಕೆಟ್ಟದ್ದು ಎಂಬುದನ್ನು ತಿಳಿಸಲು ನೂರಾರು ವರ್ಷಗಳ ಹಿಂದೆಯೇ ಕವಿ ಸರ್ವಜ್ಞ ತುಂಬ ಸೊಗಸಾಗಿ ಹೇಳಿದ್ದಾನೆ:
ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗನು ಬಂದು ಕೇಳಿದಾಗ
ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ
ಅನೇಕ ಖಾಸಗಿ ಬ್ಯಾಂಕುಗಳು ಯುವತಿಯರ ಮಧುರ ಧ್ವನಿಯ ಮೂಲಕ ವೈಯಕ್ತಿಕ ಸಾಲವನ್ನು ಮಾರುತ್ತಿವೆ. `ಕೇವಲ ಶೇಕಡ 3ರ ಬಡ್ಡಿಯ ಜಾಹೀರಾತಿಗೆ ಮಾರು ಹೋದರೆ ಹಳ್ಳಕ್ಕೆ ಬಿದ್ದಿರಿ ಎಂದೇ ಅರ್ಥ. ಏಕೆಂದರೆ, ಶೇಕಡಾ ಮೂರರ ಬಡ್ಡಿ ವರ್ಷಕ್ಕಲ್ಲ. ಅದು ತಿಂಗಳಿಗೆ! ಅಂದರೆ ವರ್ಷದ ಕೊನೆಗೆ ನೀವು ಕಟ್ಟುವ ಬಡ್ಡಿ ಬರೋಬ್ಬರಿ ಶೇಕಡಾ 36ರಷ್ಟಿರುತ್ತದೆ.
ವೈಯಕ್ತಿಕ ಸಾಲ ತೆಗೆದುಕೊಳ್ಳಲೇಬಾರದು ಎಂದಲ್ಲ. ವೈದ್ಯಕೀಯ ತುರ್ತಿನಂಥ ಸಂದರ್ಭಗಳಲ್ಲಿ ಈ ಸಾಲ ಆಪದ್ಬಾಂಧವನಂತೆ ಕೆಲಸ ಮಾಡುತ್ತದೆ. ಆಗ ಇದರ ಮೊರೆ ಹೋಗಲು ಅಡ್ಡಿಯಿಲ.
ಸಾಲದ ಆಮಿಷಕ್ಕೆ ಬಲಿಯಾಗದಿರಿ
ಒಮ್ಮೆ ನೀವು ಕಾರನ್ನು ಷೋ ರೂಂನಿಂದ ಹೊರಗೆ ತಂದಿರಿ ಎಂದರೆ ದಿನೇ ದಿನೇ ಅದರ ಮೌಲ್ಯ ಕಡಿಮೆಯಾಗುತ್ತ ಹೋಗುತ್ತದೆ. ಕಾರಿನ ಸಾಲ ತೀರಿಸುವುದಕ್ಕಿಂತಲೂ ಮುನ್ನವೇ ಅದರ ಮಾರುಕಟ್ಟೆ ಮೌಲ್ಯ ಅರ್ಧಕ್ಕದ್ದ ಇಳಿದರೆ ಅಚ್ಚರಿಯಿಲ್ಲ. ಆದ್ದರಿಂದ ವೈಯಕ್ತಿಕ ಉದ್ದೆೀಶಕ್ಕಾಗಿ ನೀವು ಕಾರು ಉಪಯೋಗಿಸುವುದಾದರೆ ನಿಮ್ಮ ಉಳಿತಾಯದ ಹಣ ಬಳಸುವುದೇ ಸೂಕ್ತ. ವಾಣಿಜ್ಯ ಉದ್ದೆೀಶಕ್ಕಾದರೆ (ಬಾಡಿಗೆ ನೀಡಲು) ಸಾಲ ನಿಮಗೆ ಅನುಕೂಲ.
ಕ್ರೆಡಿಟ್ ಕಾರ್ಡ್ಗೆ ಬಲಿಪಶುವಾಗದಿರಿ
ಕ್ರೆಡಿಟ್ ಕಾರ್ಡ್ ಹೆಸರೇ ಹೇಳುವಂತೆ ಸಾಲದ ಕಾರ್ಡ್. ಇದರ ಸಾಧಕ-ಬಾಧಕಗಳನ್ನು ಅರಿತು, ಶಿಸ್ತುಬದ್ಧವಾಗಿ ಬಳಸಿದರೆ ಇದರಿಂದ ಲಾಭವೂ ಇದೆ. ಆದರೆ, ಬಹುತೇಕರ ವಿಷಯದಲ್ಲಿ ಇದರಿಂದ ಅನನುಕೂಲವೇ ಹೆಚ್ಚು.
ಒಂದು ಸಾರಿ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಕಾಲಕ್ಕೆ ಪಾವತಿಸದಿದ್ದರೆ ಆಳದ ಸಾಲದ ಕಂದಕದಲ್ಲಿ ಬಿದ್ದಂತೆಯೇ. ಸಾವಿರ ರೂಪಾಯಿ ಬಾಕಿ ಮೊತ್ತಕ್ಕೆ ಲಕ್ಷ ರೂಪಾಯಿ ಚಕ್ರಬಡ್ಡಿಯ ನೋಟಿಸ್ ಪಡೆದವರೂ ಇದ್ದಾರೆಂದರೆ ಕ್ರೆಡಿಟ್ ಕಾರ್ಡ್ ವಿಷಯದಲ್ಲಿ ಎಷ್ಟು ಜಾಗರೂಕರಾಗಿಬೇಕು ಎಂಬುದು ತಿಳಿಯುತ್ತದೆ.
ಅರಿತು ಬಳಸಿದರೆ ಯಾವುದೂ ಅಪಥ್ಯವಲ್ಲ ಎಂಬಂತೆ ಆರ್ಥಿಕ ವಿಷಯದಲ್ಲೂ ಎಚ್ಚರಿಕೆಯ ಹೆಜ್ಜೆಯನಿರಿಸಿದರೆ ನಮ್ಮ ಸಮಾಧಾನ ನಮ್ಮ ಕೈಯಲ್ಲೇ ಇರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.