ನವದೆಹಲಿ (ಪಿಟಿಐ): ರಸಗೊಬ್ಬರ, ಅಡುಗೆ ಅನಿಲ (ಎಲ್ಪಿಜಿ) ಮತ್ತು ಸೀಮೆಎಣ್ಣೆ ಸಬ್ಸಿಡಿ ಫಲಾನುಭವಿಗಳ ಖಾತೆಗಳಿಗೆ ಸರ್ಕಾರ ಆನ್ಲೈನ್ ಮೂಲಕ ನೇರವಾಗಿ ಹಣ ಪಾವತಿ ಮಾಡಲಿದೆ. ಈ `ಇ-ಪಾವತಿ~ ವ್ಯವಸ್ಥೆಗೆ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಚಾಲನೆ ನೀಡಲಿದ್ದಾರೆ.
`ಇ-ಪಾವತಿ~ ವ್ಯವಸ್ಥೆ ಮೂಲಕ ಫಲಾನುಭವಿಗಳಿಗೆ ನೇರವಾಗಿ ಮತ್ತು ತ್ವರಿತವಾಗಿ ಸಬ್ಸಿಡಿ ಹಣ ಲಭಿಸಲಿದೆ. ಇ-ಪಾವತಿ ವ್ಯವಸ್ಥೆ ಪಾರದರ್ಶಕವಾಗಿದ್ದು, ಗ್ರಾಹಕರ ಖಾತೆಗಳಿಗೆ ನೇರವಾಗಿ ನಗದು ರವಾನೆಯಾಗುತ್ತದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈ ಯೋಜನೆಯ ಜಾಲತಾಣಕ್ಕೆ `ಇ-ಪಾವತಿ ಪ್ರವೇಶ ದ್ವಾರ~ (ಜಿಇಪಿಜಿ) ಎಂದು ಹೆಸರಿಟ್ಟಿದ್ದು, ಆಯವ್ಯಯ ಇಲಾಖೆ ಈ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ. ನಂದನ್ ನೀಲೇಕಣಿ ನೇತೃತ್ವದಲ್ಲಿನ ಕಾರ್ಯಪಡೆ ನೇರ ನಗದು ಸಬ್ಸಿಡಿಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಅಂಶಗಳನ್ನು ಅಂತಿಮಗೊಳಿಸಿದ್ದು, ತನ್ನ ಮಧ್ಯಂತರ ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ. ಮಾರ್ಚ್ 2012ರ ವೇಳೆಗೆ ಸರ್ಕಾರ ನೇರ ನಗದು ಸಬ್ಸಿಡಿ ಯೋಜನೆನ್ನು ಜಾರಿಗೊಳಿಸುವ ಗುರಿ ಇಟ್ಟುಕೊಂಡಿದೆ.
`ಜಿಇಪಿಜಿ~ ಅತ್ಯಂತ ಸುರಕ್ಷಿತ ಆನ್ಲೈನ್ ಈ ಪಾವತಿ ವ್ಯವಸ್ಥೆಯಾಗಿದೆ. ಈ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಿಡಿ ಹಣ ವರ್ಗಾವಣೆ ಆಗುತ್ತದೆ. ವಹಿವಾಟು ತ್ವರಿತವಾಗಿ ಆಗುವುದು ಮಾತ್ರವಲ್ಲದೆ, ಇದು ಸಾಂಪ್ರದಾಯಿಕ `ಚೆಕ್~ ಬಳಕೆಯನ್ನೂ ತಡೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಆರ್ಬಿಐ ಸೂಚನೆ:ಪರಿಸರ ಸ್ನೇಹಿ `ಹಸಿರು~ ವಹಿವಾಟು ತಂತ್ರಜ್ಞಾನ ಉತ್ತೇಜಿಸುವ ಸಲುವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಲ್ಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್ಬಿಎಫ್ಸಿಎಸ್) ಆನ್ಲೈನ್ ವಹಿವಾಟು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಕಡ್ಡಾಯ ಸೂಚನೆ ನೀಡಿದೆ.
ಇದು ಬ್ಯಾಂಕಿಂಗ್ ನಿರ್ವಹಣಾ ವೆಚ್ಚ ಕಡಿಮೆ ಮಾಡುತ್ತದೆ ಅಲ್ಲದೆ ತ್ವರಿತ ಮತ್ತು ಶೀಘ್ರ ವಹಿವಾಟಿಗೂ ಸಹಕಾರಿ. ಜತೆಗೆ, ಸರ್ಕಾರದ `ಹಸಿರು~ ಯೋಜನೆಯ ಭಾಗವೂ ಆಗಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.