ಬೆಂಗಳೂರು: ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು (ಕಾಸಿಯಾ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
‘ಕಾಸಿಯಾ’ ಅಧ್ಯಕ್ಷ ಹನುಮಂತೇಗೌಡ. ಆರ್. ಅವರ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದ ನಿಯೋಗವು ಈ ಮನವಿ ಸಲ್ಲಿಸಿದೆ.
ಸಂಸತ್ನಲ್ಲಿ ಬಾಕಿ ಉಳಿದಿರುವ, ಕಾರ್ಮಿಕ ಸಂಬಂಧಿತ ಕೆಲವು ಕ್ಲಿಷ್ಟಕರ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಸಣ್ಣ ಕಾರ್ಖಾನೆಗಳ ಮಸೂದೆಯ ಶೀಘ್ರ ಅಂಗೀಕಾರ, ಎಸ್ಎಂಇಗಳಿಗೆ ನೀಡುವ ಸಾಲದ ಬಡ್ಡಿಯನ್ನು ಶೇಕಡಾ 4ಕ್ಕೆ ನಿಗದಿಪಡಿಸುವ, ಜಿಎಸ್ಟಿ ರಿಟರ್ನ್ಸ್ ಸರಳೀಕರಣ, ತೆರಿಗೆ ದರಗಳ ಅಸಮಾನತೆ ನಿವಾರಣೆ, ಕೇಂದ್ರೋದ್ಯಮಗಳು ಎಸ್ಎಂಇಗಳಿಂದ ನಿಗದಿತ ಪ್ರಮಾಣದಲ್ಲಿ ಖರೀದಿಸುವುದನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವ ಬೇಡಿಕೆಗಳ ಪಟ್ಟಿಯನ್ನು ಮನವಿ ಪತ್ರ ಒಳಗೊಂಡಿದೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ ವಾರ್ಷಿಕ ವರದಿಗಾಗಿ ಆನ್ಲೈನ್ನಲ್ಲಿ ಮಾಹಿತಿ ಸಲ್ಲಿಸಲು ವಿನಾಯ್ತಿ ನೀಡಬೇಕು, ಬಂಡವಾಳ ಹೂಡಿಕೆ ಕುರಿತು ಪ್ರತ್ಯೇಕವಾಗಿ ಪ್ರಧಾನಿ ಸಲಹಾ ಮಂಡಳಿ ರಚಿಸಬೇಕು ಮತ್ತು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.