ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್(ಎಸ್ಬಿಎಂ) 2011-12ನೇ ಸಾಲಿನ ನಿವ್ವಳ ಲಾಭದಲ್ಲಿ ಭಾರಿ(ಶೇ. 26.26ರಷ್ಟು) ಕುಸಿತ ಕಂಡಿದೆ. 4ನೇ ತ್ರೈಮಾಸಿಕದಲ್ಲಿಯೂ ನಿವ್ವಳ ಲಾಭ ಶೇ. 29ರಷ್ಟು ಕುಸಿದಿದೆ.
ಜತೆಗೆ ಬ್ಯಾಂಕ್ನ ಒಟ್ಟಾರೆ ಅನುತ್ಪಾದಕ ಆಸ್ತಿ ಪ್ರಮಾಣವೂ(ಎನ್ಪಿಎ) 2012ರ ಮಾರ್ಚ್ 31ರ ವೇಳೆಗೆ ರೂ 1502.62 ಕೋಟಿ ಮುಟ್ಟಿದೆ. ಹಿಂದಿನ ವರ್ಷ ಇದು ರೂ 863.74 ಕೋಟಿಯಷ್ಟಿದ್ದಿತು.
ಶತಮಾನ ಸಂಭ್ರಮದ ಹೊಸ್ತಿಲಲ್ಲಿ |
ಮೈಸೂರು ಮಹಾರಾಜರ ಕನಸು, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ 1913ರ ಅಕ್ಟೋಬರ್ 2ರಂದು ಮೈಸೂರು ಬ್ಯಾಂಕ್ ಸ್ಥಾಪನೆಯಾಯಿತು. ಬ್ಯಾಂಕ್ಗೆ 2013-14 ಶತಮಾನ ಸಂಭ್ರಮದ ವರ್ಷ. ಹಾಗಾಗಿ 2012-13ನೇ ಹಣಕಾಸು ವರ್ಷದಲ್ಲಿ ರೂ 1 ಲಕ್ಷ ಕೋಟಿ ವಹಿವಾಟು ಗುರಿ ಹೊಂದಲಾಗಿದೆ ಎಂದು ಹಂಸಿನಿ ಮೆನನ್ ಹೇಳಿದರು. |
`ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರಿಂದ ಕೃಷಿ ಸಾಲ ವಸೂಲಿ ಕಷ್ಟವಾಯಿತು. ಕೃಷಿ ಸಾಲವೇ ರೂ 348 ಕೋಟಿಯಷ್ಟು ಬಾಕಿಯಾಗಿದೆ. ಹಾಗಾಗಿಯೇ ಒಟ್ಟಾರೆ ಎನ್ಪಿಎ ಶೇ. 3.70 ಪ್ರಮಾಣಕ್ಕೆ ಹೆಚ್ಚಿದೆ (ನಿವ್ವಳ ಎನ್ಪಿಎ ಶೇ. 1.93). ಜತೆಗೆ ಠೇವಣಿ ಮೇಲಿನ ಬಡ್ಡಿದರದಲ್ಲಿಯೂ ಹೆಚ್ಚಳವಾಗಿದ್ದರಿಂದ ಠೇವಣಿಗಳ ಮೇಲಿನ ವೆಚ್ಚವೂ ಹೆಚ್ಚಿತು. ಪರಿಣಾಮವಾಗಿ 2011-12ನೇ ಹಣಕಾಸು ವರ್ಷದಲ್ಲಿನ ನಿವ್ವಳ ಲಾಭ ರೂ 369.15 ಕೋಟಿಗೆ ಕುಸಿಯಿತು ಎಂದು ಎಸ್ಬಿಎಂ ವ್ಯವಸ್ಥಾಪಕ ನಿರ್ದೇಶಕಿ ಹಂಸಿನಿ ಮೆನನ್ ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಈ ವರ್ಷ ಸಾಲ ವಸೂಲಿಗೆ ಹೊಸತಾದ ವಿಶೇಷ ತಂಡ ರಚಿಸಲಿದ್ದೇವೆ. ಕಟ್ಟುನಿಟ್ಟಾಗಿ ಸಾಲ ವಸೂಲಿ ಮಾಡಲಿದ್ದೇವೆ. ಆ ಮೂಲಕ ಎನ್ಪಿಎ ಕಡಿಮೆ ಮಾಡಲಿದ್ದೇವೆ ಎಂದು 2012-13ರಲ್ಲಿ ಬ್ಯಾಂಕ್ ಕೈಗೊಳ್ಳಲಿರುವ ಕಾರ್ಯತಂತ್ರ ವಿವರಿಸಿದರು.
ಬ್ಯಾಂಕ್ 2011-12ರಲ್ಲಿ ರೂ 50186 ಕೋಟಿ ಠೇವಣಿ (ಶೇ. 16.10 ಹೆಚ್ಚಳ) ಮತ್ತು ರೂ 40653 ಕೋಟಿ ಸಾಲ ವಿತರಣೆ (ಶೇ. 18.03 ಹೆಚ್ಚಳ) ಮೂಲಕ ರೂ 90,839 ಕೋಟಿ ವಹಿವಾಟು ನಡೆಸಿದೆ. ರೂ 1059.61 ಕೋಟಿ ನಿರ್ವಹಣಾ ಲಾಭವೂ ಬಂದಿದೆ(ಶೇ. 9.72 ಹೆಚ್ಚಳ) ಎಂದು ವಿವರಿಸಿದರು.
ಎಸ್ಬಿಎಂ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತುಕೊಟ್ಟಿದ್ದು, ಮಾರ್ಚ್ 31ರವರೆಗೆ ಒಟ್ಟು ರೂ 5247.21ಕೋಟಿ ಕೃಷಿ ಸಾಲ ವಿತರಿಸಿದೆ. ನೇರ ಕೃಷಿ ಸಾಲವನ್ನೇ 4403.68 ಕೋಟಿಯಷ್ಟು (ಶೇ. 16.87ರಷ್ಟು ಅಧಿಕ) ನೀಡಿದೆ. ಸ್ವಸಹಾಯ ಸಂಘಗಳಿಗೆ ಸಾಲ ನೀಡಿರುವುದಕ್ಕೆ ಬ್ಯಾಂಕ್ ಸತತವಾಗಿ ಪ್ರಶಸ್ತಿ ಪಡೆಯುತ್ತಿದೆ ಎಂದು ಹೇಳಿದರು.
67 ಹೊಸ ಎಟಿಎಂ ಸ್ಥಾಪಿಸಿದ್ದು ಎಟಿಎಂ ಸಂಖ್ಯೆ 802ಕ್ಕೆ ಹೆಚ್ಚಿದೆ. 33 ಹೊಸ ಶಾಖೆ ಆರಂಭದಿಂದ ಬ್ಯಾಂಕ್ ಶಾಖೆ ಸಾಮರ್ಥ್ಯ 737ಕ್ಕೇರಿದೆ ಎಂದರು.
ಎಸ್ಬಿಎಂನ ಹಿರಿಯ ಅಧಿಕಾರಿಗಳಾದ ಎಸ್.ವಿಜಯ್ಕುಮಾರ್, ಕಲ್ಯಾಣ್ ಮುಖರ್ಜಿ, ಲಕ್ಷ್ಮೀಶ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.