ADVERTISEMENT

ಕೃಷಿ ಸಾಲ ಹೆಚ್ಚಿಸಲು ಬ್ಯಾಂಕುಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 19:30 IST
Last Updated 11 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಉತ್ತಮ ಮುಂಗಾರು ಲಭಿಸಿರುವು­ದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಈ ವಲಯಕ್ಕೆ ನೀಡುವ ಸಾಲದ ಪ್ರಮಾ­ಣವನ್ನು ಹೆಚ್ಚಿಸಬೇಕು ಎಂದು ಹಣ­ಕಾಸು ಸಚಿವಾಲಯ ಬ್ಯಾಂಕುಗಳಿಗೆ ಸೂಚನೆ ನೀಡಿದೆ.

‘ಈ ಬಾರಿ ಉತ್ತಮ ಮುಂಗಾರು ಲಭಿಸಿದೆ. ಇದರಿಂದ ಕೃಷಿ ವಲಯಕ್ಕೆ ಹೆಚ್ಚುವರಿ ಸಾಲದ ಅಗತ್ಯವಿದ್ದು, ಬೇಡಿಕೆ ಪೂರೈಸುವಂತೆ ಎಲ್ಲ ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಬಜೆಟ್‌­ನಲ್ಲಿ ಕೃಷಿ ವಲಯಕ್ಕೆ ನಿಗದಿಪ­ಡಿಸಿದ್ದ ಸಾಲದ ಪ್ರಮಾಣವನ್ನೂ ಹೆಚ್ಚಿಸಲಾಗು­ವುದು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಜೆ.ಡಿ ಸೀಲಂ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ದೇಶದ ಶೇ 40ರಷ್ಟು ಜನರಿಗೆ ಸಾಂಸ್ಥಿಕ ಹಣಕಾಸು ಸಂಸ್ಥೆಗಳಿಂದ ಸಾಲ ಲಭಿಸುತ್ತಿಲ್ಲ. ಅದರಲ್ಲೂ ಹಳ್ಳಿಗಾಡಿನ ರೈತರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ  ಸಕಾಲದಲ್ಲಿ ಕೃಷಿ ಸಾಲ ಲಭಿಸುತ್ತಿಲ್ಲ. ಒಟ್ಟು ಕೃಷಿ ಸಾಲದಲ್ಲಿ ಶೇ 1ರಷ್ಟನ್ನಾ­ದರೂ ಬಡ ರೈತರಿಗೆ ಮೀಸಲಿಡಬೇಕು’ ಎಂದು  ಅವರು ಹೇಳಿದರು.

ಬೆಳೆ ವಿಮೆ ಪರಿಹಾರ ಹೆಚ್ಚಳಕ್ಕೆ  ಸಂಬಂಧಿಸಿದಂತೆ ಕೃಷಿ ಸಚಿವಾಲಯ, ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ   ಪ್ರಸ್ತಾವಗಳನ್ನು ಪರಿಶೀಲಿ­ಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.