ಹುಬ್ಬಳ್ಳಿ: ಕೇಂದ್ರ ಸರ್ಕಾರದ ಹತ್ತಿ ರಫ್ತು ನಿಷೇಧ ನೀತಿ ವಿರೋಧಿಸಿ ಧಾರವಾಡ, ಹಾವೇರಿ, ವಿಜಾಪುರ ಜಿಲ್ಲೆಗಳಲ್ಲಿ ಗುರುವಾರ ಹತ್ತಿ ಖರೀದಿ ಸಂಪೂರ್ಣ ಸ್ಥಗಿತಗೊಂಡಿತ್ತು.ಹುಬ್ಬಳ್ಳಿ ಎಪಿಎಂಸಿಗೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ ಮತ್ತು ಯಲ್ಲಾಪುರ ಮಾರುಕಟ್ಟೆಗೆ ಹತ್ತಿ ಬಾರದ ಕಾರಣ ವಹಿವಾಟು ನಡೆಯಲಿಲ್ಲ.
ಆದರೆ, ಗದಗ ಎಪಿಎಂಸಿ ಮತ್ತು ಕಾಟನ್ ಸೇಲ್ ಸೊಸೈಟಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಹಿವಾಟು ನಡೆದಿದೆ. ವಹಿವಾಟು ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇಲ್ಲದ ಕೆಲ ರೈತರು ಹತ್ತಿಯನ್ನು ಮಾರುಕಟ್ಟೆಗೆ ತಂದು ವಾಪಸ್ಸು ತೆಗೆದುಕೊಂಡುವ ಹೋಗುವ ದೃಶ್ಯ ಕೆಲವು ಜಿಲ್ಲೆಗಳಲ್ಲಿ ಕಂಡುಬಂತು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ರಾಜ್ಯ ಕಾಟನ್ ಅಸೋಸಿಯೇಷನ್ ಬುಧವಾರ ಹುಬ್ಬಳ್ಳಿಯಲ್ಲಿ ಸಭೆ ನಡೆಸಿ, ಹತ್ತಿ ವಹಿವಾಟು ಸ್ಥಗಿತಗೊಳಿಸಲು ನಿರ್ಧಾರ ತೆಗೆದುಕೊಂಡಿದ್ದವು.ಮುಂದಿನ ಸೂಚನೆ ಬರುವವರೆಗೆ ಎಪಿಎಂಸಿಗೆ ಹತ್ತಿ ತರಬಾರದು ಎಂದು ರೈತರಿಗೆ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.