ಬೆಂಗಳೂರು: ‘ಕೋಳಿ ಮಾಂಸ ಮತ್ತು ಮೊಟ್ಟೆ ದರ ನಿಯಂತ್ರಿಸುವ ಉದ್ದೇಶದಿಂದ ರೂಪಿಸಿರುವ ನಿಯಾಮವಳಿ ಸದ್ಯದಲ್ಲೆ ಜಾರಿಗೆ ಬರಲಿದೆ’ ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳದ ಅಧ್ಯಕ್ಷ ಡಿ.ಕೆ. ಕಾಂತರಾಜು ತಿಳಿಸಿದರು.
‘ಮಹಾ ಮಂಡಳದಿಂದ ನಿಯಮಾವಳಿ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದು ಪರಿಶೀಲನೆ ಹಂತದಲ್ಲಿದೆ’ ಎಂದು ಅವರು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
‘ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆ ಮೇಲೆ ಹಿಡಿತ ಹೊಂದಿವೆ. ಈ ಕಂಪನಿಗಳೇ ಕೋಳಿ ಮೊಟ್ಟೆ ಮತ್ತು ಮಾಂಸದ ದರ ನಿಗದಿ ಮಾಡುತ್ತಿವೆ. ಒಂದು ಮೊಟ್ಟೆಗೆ ₹ 3.50 ಮಾತ್ರ ಕೋಳಿ ಫಾರಂ ಮಾಲೀಕರಿಗೆ ಸಿಗುತ್ತಿದೆ. ಬೇಡಿಗೆ ಹೆಚ್ಚಾದಾಗ ಮೊಟ್ಟೆ ದರ ಏರಿಕೆಯಾದರೆ, ಅದರ ಲಾಭ ನಮಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಹೀಗಾಗಿ ನಿಯಮಾವಳಿ ಅಗತ್ಯವಿದೆ’ ಎಂದರು.
‘ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಮಾದರಿಯಲ್ಲೇ ಕುಕ್ಕುಟ ಮಹಾಮಂಡಳ ಬೆಳೆಸುವ ಆಲೋಚನೆ ಇದೆ. ಎಲ್ಲಾ ಜಿಲ್ಲೆಗಳಲ್ಲೂ ಸಂಘಗಳನ್ನು ತೆರೆದು ಅವುಗಳ ಮೂಲಕವೇ ಕೋಳಿ ಮರಿ, ಅವುಗಳಿಗೆ ಬೇಕಿರುವ ಆಹಾರ ವಿತರಿಸುವ ವ್ಯವಸ್ಥೆ ತರಲಾಗುವುದು. ಬಳಿಕ ಫಾರಂ ಮಾಲೀಕರಿಂದ ಕೋಳಿಗಳನ್ನು ಖರೀದಿಸಿ ಮಂಡಳದ ಮೂಲಕವೇ ಮಾರಾಟ ಮಾಡುವ ಉದ್ದೇಶ ಇದೆ’ ಎಂದು ಅವರು ವಿವರಿಸಿದರು.
ಮಂಡಳದ ಉಪಾಧ್ಯಕ್ಷ ರುದ್ರಮುನಿ ಮಾತನಾಡಿ, ‘ಬಹುರಾಷ್ಟ್ರೀಯ ಕಂಪನಿಗಳು ಸಣ್ಣದಾಗಿ ಕೋಳಿ ಫಾರಂ ನಡೆಸುತ್ತಿರುವ ರೈತರ ಮೇಲೆ ಸವಾರಿ ಮಾಡುತ್ತಿವೆ. ಅದನ್ನು ತಡೆಯಲು ನಿಯಮಾವಳಿ ರೂಪಿಸಲಾಗಿದೆ’ ಎಂದು ಹೇಳಿದರು.
‘ಕೋಳಿ ಫಾರಂ ತೆರೆಯಲು ಪರವಾನಗಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯ್ತಿಯಿಂದ ಹಿಂಪಡೆಯಬೇಕು ಎಂಬುದನ್ನು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ. ನಿಯಮಾವಳಿ ಜಾರಿಗೆ ಬಂದರೆ ಕೋಳಿ ಫಾರಂ ಮಾಲೀಕರಿಗೆ ಅನುಕೂಲವಾಗಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.