ADVERTISEMENT

ಗಣಿ ಸಮಸ್ಯೆ ಸ್ವಯಂಕೃತ ಅಪರಾಧ: ಖ್ವಾಜಾ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಗಣಿ ಉದ್ಯಮ ಈಗ ಎದುರಿಸುತ್ತಿರುವ  ಸಮಸ್ಯೆಗಳಿಗೆ ಸ್ವಯಂಕೃತ ಅಪರಾಧವೇ ಕಾರಣ ಎಂದು ಕೇಂದ್ರ ಗಣಿ ಖಾತೆ ಕಾರ್ಯದರ್ಶಿ ಆರ್‌.ಎಚ್‌. ಖ್ವಾಜಾ ಅಭಿಪ್ರಾಯಪಟ್ಟರು.

ಪರಿಸರ ಸ್ನೇಹಿ ಮತ್ತು ವೈಜ್ಞಾನಿಕ ಗಣಿಗಾರಿಕೆ ಮೂಲಕ ಮಾತ್ರವೇ ಈ ಉದ್ಯಮಕ್ಕೆ ಭವಿಷ್ಯ ರೂಪಿಸಲು ಸಾಧ್ಯ ಎಂದು ಅವರು ಕಿವಿಮಾತು ಹೇಳಿದರು.

ನಗರದ ಹೊರವಲಯದ ಬೆಂಗ ಳೂರು ಅಂತರರಾಷ್ಟ್ರೀಯ ವಸ್ತು ಪ್ರದ ರ್ಶನ ಕೇಂದ್ರದಲ್ಲಿ ಭಾರತೀಯ ಗಣಿ ಉದ್ಯಮಿಗಳ ಒಕ್ಕೂಟ(ಫಿಮಿ) ಆಶ್ರಯ ದಲ್ಲಿ ಗುರುವಾರ ಆರಂಭವಾದ 3 ದಿನಗಳ ಗಣಿಗಾರಿಕೆ  ಸಮಾವೇಶ ಮತ್ತು ವಸ್ತು ಪ್ರದರ್ಶನ ‘ಮೈನಿಂಗ್‌ ಮಾಝ್ಮಾ –2013’ ಉದ್ಘಾಟಿಸಿ ಅವರು ಮಾತನಾಡಿದರು.

ಗಣಿಗಾರಿಕೆ ಕ್ಷೇತ್ರದಲ್ಲಿ ಭಾರತ ವಿಶ್ವ ದಲ್ಲೇ ಪ್ರಮುಖ ಪಾತ್ರ ವಹಿಸುತ್ತಿದೆ. 2011–12ನೇ ಸಾಲಿನಲ್ಲಿ ಸುಮಾರು ₨26 ಸಾವಿರ ಕೋಟಿ ಮೌಲ್ಯದ ಖನಿಜಗಳು ಭಾರತದಲ್ಲಿ ಉತ್ಪಾದನೆ ಯಾಗಿವೆ. ಕ್ರೋಮೈಟ್‌ ಉತ್ಪಾದನೆ ಯಲ್ಲಿ ಭಾರತ 2ನೇ ಸ್ಥಾನ ಪಡೆದಿದೆ. ಕಲ್ಲಿದ್ದಲು ಮತ್ತು ಲಿಗ್ನೈಟ್ ಉತ್ಪಾದನೆ ಯಲ್ಲಿ 3, ಕಬ್ಬಿಣದ ಅದಿರು ಉತ್ಪಾದನೆ ಯಲ್ಲಿ 4ನೇ ಸ್ಥಾನ ಪಡೆದಿದೆ ಎಂದರು.

ನಿಮಗೇನು ಕಷ್ಟ?: ‘ಗಣಿಗಾರಿಕೆ ಕ್ಷೇತ್ರ ದಲ್ಲಿ ಬಂಡವಾಳ ಹೂಡಲು ಅಪಾರ ಅವಕಾಶಗಳಿವೆ. ಆದರೆ, ಈವರೆಗೆ ಎಲ್ಲಿ ತಪ್ಪಿದ್ದೇವೆ ಎನ್ನುವ ಆತ್ಮಾವಲೋಕನ ಮುಖ್ಯ. ಒಂದು ಬಾರಿಯಾದರೂ ಹೃದಯ ಮುಟ್ಟಿಕೊಂಡು ಚಿಂತನೆ ಮಾಡಿ. ವೈಜ್ಞಾನಿಕ ಗಣಿಗಾರಿಕೆ ಕೈಗೊ ಳ್ಳದ ಪರಿಣಾಮ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ. ಸರ್ಕಾರಿ ಸ್ವಾಮ್ಯದ ನೈವೇಲಿ ಲಿಗ್ನೈಟ್‌ ಮತ್ತು ಸಿಂಗರೇಣಿ ಕಂಪೆನಿಗಳು ಪರಿಸರ ಸ್ನೇಹಿಯಾಗಿ ಗಣಿ ಗಾರಿಕೆ ನಡೆಸುತ್ತಿರುವಾಗ ಉಳಿದ ಕಂಪೆನಿಗಳಿಗೆ ಏಕೆ ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದರು.

ಸಾಮಾಜಿಕ ಜವಾಬ್ದಾರಿ ಅರಿತು, ಉತ್ತಮ ಪದ್ಧತಿ ಅಳವಡಿಸಿಕೊಂಡು ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಆರೋಪ–ಪ್ರತ್ಯಾರೋಪ ನಿಲ್ಲಿಸಿ ದೂರ ದೃಷ್ಟಿಯೊಂದಿಗೆ ಕಾರ್ಯ ನಿರ್ವಹಿಸ ಬೇಕು. ರಚನಾತ್ಮಕ ಸಲಹೆ ಮತ್ತು ಪರಿ ಹಾರಗಳಿಂದ ಗಣಿ ಉದ್ಯಮದ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು  ಸಲಹೆ ನೀಡಿದರು.

ಭಾರತೀಯ ಗಣಿ ಸಂಸ್ಥೆಯನ್ನು (ಐಬಿಎಂ) ಪುನರ್‌ ರಚಿಸಲು ಉದ್ದೇಶಿಸ ಲಾಗಿದೆ. ಆದರೆ, ತರಾತುರಿಯಲ್ಲಿ ಕೈಗೊ ಳ್ಳುವುದಿಲ್ಲ. ಎಲ್ಲ ವಿಷಯಗಳನ್ನು ಅವ ಲೋಕಿಸಿ ಮುಂದಿನ ಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಗಣಿ ಉದ್ಯಮ ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳು ಕುರಿತು ಫಿಮಿ ಅಧ್ಯಕ್ಷ ಎಚ್‌.ಸಿ. ದಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.