ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬರುತ್ತಿದ್ದಂತೆ ಆಹಾರ ಧಾನ್ಯ, ಹಿಟ್ಟು, ಹಾಲು, ತರಕಾರಿ ಮತ್ತು ಹಣ್ಣುಗಳ ಬೆಲೆಗಳು ಶೇ 5ರಷ್ಟು ಅಗ್ಗವಾಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜಿಎಸ್ಟಿ ವ್ಯಾಪ್ತಿಯಿಂದ ದವಸ ಧಾನ್ಯ, ಬೇಳೆಕಾಳು, ಮೈದಾ ಮತ್ತು ಕಡಲೆ ಹಿಟ್ಟಿಗೆ ವಿನಾಯ್ತಿ ನೀಡಲಾಗಿದೆ.
ಹೊಸ ತೆರಿಗೆ ವ್ಯವಸ್ಥೆಯಲ್ಲಿ ಹಾಲು, ಉಪ್ಪು, ಕಚ್ಚಾ ರೇಷ್ಮೆ, ಉಣ್ಣೆ, ಸಣಬು, ಕೈಗಳಿಂದ ನಿರ್ವಹಿಸಬಹುದಾದ ಕೃಷಿ ಸಲಕರಣೆಗಳು ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ. ಈ ಸರಕುಗಳಿಗೆ ಜಿಎಸ್ಟಿ ಅನ್ವಯವಾಗದ ಕಾರಣಕ್ಕೆ, ಇವುಗಳ ಬೆಲೆಗಳು ಸದ್ಯದ ಬೆಲೆಗಿಂತ ಶೇ 4 ರಿಂದ 5ರಷ್ಟು ಅಗ್ಗವಾಗಲಿವೆ ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ನೋಂದಾಯಿತ ಟ್ರೇಡ್ ಮಾರ್ಕ್ ಹೊಂದಿದ ಬ್ರ್ಯಾಂಡೆಡ್ ಆಹಾರ ಧಾನ್ಯ ಮತ್ತು ಹಿಟ್ಟು ಶೇ 5ರಷ್ಟು ತೆರಿಗೆಗೆ ಒಳಪಡಲಿವೆ. ಆಹಾರ ಧಾನ್ಯ, ಹಾಲು ಮತ್ತು ತರಕಾರಿಗಳ ಮೇಲೆ ಸದ್ಯಕ್ಕೆ ಕೇಂದ್ರ ಸರ್ಕಾರದ ಯಾವುದೇ ತೆರಿಗೆಗಳಿಲ್ಲ. ಕೆಲ ರಾಜ್ಯ ಸರ್ಕಾರಗಳು ಶೇ 4ರಿಂದ 5ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತಿವೆ.
ಜಿಎಸ್ಟಿ ಅರಿವು ಜನಪ್ರತಿನಿಧಿಗಳಿಗೆ ಜೇಟ್ಲಿ ಮೊರೆ: ‘ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲು ನೆರವಾಗಬೇಕು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜನ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.