ADVERTISEMENT

ಜಿಡಿಪಿ ಚೇತರಿಕೆ:ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಯುವ ಸೂಚನೆಗಳು ಕಂಡುಬಂದಿವೆ. ಇದರ ಜತೆಗೆ ಉತ್ತಮ ಮುಂಗಾರು ಲಭಿಸಿದರೆ ಖಂಡಿತ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಚೇತರಿಸಿಕೊಳ್ಳಲಿದೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸೋಮವಾರ ಇಲ್ಲಿ ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯ (ಸಿಬಿಇಸಿ) ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

`ಮೊದಲನೇಯ ಸುತ್ತಿನ ಜಾಗತಿಕ ಆರ್ಥಿಕ ಹಿಂಜರಿತಕ್ಕಿಂತಲೂ ವೇಗವಾಗಿ ಎರಡನೇಯ ಸುತ್ತಿನ ಆರ್ಥಿಕ ಹಿಂಜರಿತ ಭೀತಿ ಪ್ರಪಂಚವನ್ನು ಆವರಿಸಿದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಗಳಿಗೆ ತಕ್ಕಂತೆ ಪೂರ್ವಭಾವಿಯಾಗಿ ಸಕಾರಾತ್ಮಕ ಆರ್ಥಿಕ ನೀತಿಗಳನ್ನು ಕೈಗೊಳ್ಳುವ ಅಗತ್ಯ ಇದೆ. ಅಂತಹ ಮುನ್ನೋಟದ ಕೊರತೆ ಇದೆ~ ಎಂದರು. 

 ಸದ್ಯ ದೇಶದ ಆರ್ಥಿಕತೆಯು ಗರಿಷ್ಠ ವಿತ್ತೀಯ ಕೊರತೆಯೊಂದಿಗೆ ದುರ್ಗಮ ಹಾದಿಯಲ್ಲಿದೆ. ಕಳೆದ ಹಣಕಾಸು ವರ್ಷದಲ್ಲಿ (2011-12) ಶೇ 6.5ರಷ್ಟು `ಜಿಡಿಪಿ~ ದಾಖಲಾಗಿದ್ದು 9 ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿತ ಕಂಡಿದೆ.

ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ ಸಾರ್ವಕಾಲಿಕ ದಾಖಲೆ ಮಟ್ಟ ರೂ 56.52ಕ್ಕೆ ಕುಸಿತ ಕಂಡಿದೆ.  ಇಂತಹ ಅನೇಕ ಪ್ರತಿಕೂಲ ಪರಿಸ್ಥಿತಿಗಳು ಇದ್ದರೂ, ಮುಂಬರುವ ದಿನಗಳಲ್ಲಿ ಆರ್ಥಿಕ ಸ್ಥಿತಿಗತಿ ಸುಧಾರಿಸಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.