ADVERTISEMENT

ಜಿಮ್-2 ಉನ್ನತ ಶ್ರೇಣಿ ಸಾಧನೆ: ರಾಜುಗೌಡ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST

ಬೆಂಗಳೂರು: `ಮೊದಲ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ (ಜಿಮ್) ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದೇವೆ. 2ನೇ ಸಮಾವೇಶದಲ್ಲಿ ಉನ್ನತ ಶ್ರೇಣಿಯಲ್ಲಿ(ಡಿಸ್ಟಿಂಕ್ಷನ್) ಉತ್ತೀರ್ಣರಾಗಲಿದ್ದೇವೆ~ ಎಂದು ಸಣ್ಣ ಕೈಗಾರಿಕಾ ಸಚಿವ ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಕೈಗಾರಿಕಾ ವಸ್ತುಪ್ರದರ್ಶನ ಕೇಂದ್ರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ (ಜಿಮ್) ವಸ್ತುಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, `ಜಿಮ್- 1ರ ಒಡಂಬಡಿಕೆಗಳಲ್ಲಿ ಅನುಷ್ಠಾನದಲ್ಲಿ ಶೇ 62ರಷ್ಟು ಫಲಿತಾಂಶ ಬಂದಿದೆ. ಜಿಮ್- 2ರಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕ ಪಡೆಯಲಿದ್ದೇವೆ~ ಎಂದರು.

ಸಮಾವೇಶದಲ್ಲಿ ಸಣ್ಣ ಕೈಗಾರಿಕಾ ಕ್ಷೇತ್ರ ಸೇರಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, `ನೀವೆಲ್ಲ (ಮುಖ್ಯಮಂತ್ರಿ, ಭಾರಿ ಕೈಗಾರಿಕಾ ಸಚಿವರು) ಹೆಲಿಕಾಪ್ಟರ್, ಏರೋಪ್ಲೇನ್‌ನಲ್ಲಿ ಹೋಗುತ್ತಿದ್ದೀರಿ. ಬಸ್‌ನಲ್ಲಿ ಹೋಗುತ್ತಿದ್ದ ನಮ್ಮನ್ನು ಬಿಟ್ಟು ಬಿಡುತ್ತೀರಿ ಎಂದುಕೊಂಡಿದ್ದೆ. ಆದರೆ ನಮ್ಮ ಇಲಾಖೆಯನ್ನೂ ನಿಮ್ಮ ಜತೆಗೆ ಕರೆದೊಯುತ್ತಿದ್ದೀರಿ. ಖುಷಿಯಾಗಿದೆ~ ಎಂದರು.

`ವಿದೇಶಿ ಕಂಪೆನಿಗಳ ಹೂಡಿಕೆಯಿಂದ ರಾಜ್ಯದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಬೇಕು.ಅದರಿಂದ ರಾಜ್ಯದ ಶೇ80ರಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬೇಕು ಎಂಬ ಸರ್ಕಾರದ ಕನಸು ಸಮಾವೇಶದಿಂದ  ನನಸಾಗಲಿದೆ~ ಎಂದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಪ್ರಕಾಶ್ ಎನ್.ರಾಯ್ಕರ್ ಮಾತನಾಡಿ, `ಜಾಗತಿಕ ಆರ್ಥಿಕ ಕುಸಿತದ ಈಗಿನ ಸಂದರ್ಭದಲ್ಲಿ ನಗರದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುತ್ತಿರುವುದು ಸೂಕ್ತವಾಗಿದೆ. ಹೆಚ್ಚು ಹೂಡಿಕೆ ನಿರೀಕ್ಷಿಸಲು ಇದು ಸರಿಯಾದ ಕಾಲ~ ಎಂದು ಅಭಿಪ್ರಾಯಪಟ್ಟರು.

ಭಾರತೀಯ ವಾಣಿಜ್ಯೋದ್ಯಮಗಳ ಮಹಾಸಂಸ್ಥೆ ಸಹ ಅಧ್ಯಕ್ಷ ಜೆ.ಕ್ರಾಸ್ತಾ, `ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಕ್ಷೇತ್ರಕ್ಕೆ ಜಿಮ್ ಸುವರ್ಣಾವಕಾಶ ಒದಗಿಸಲಿದೆ~ ಎಂದರು.

ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಭಾರತದಲ್ಲಿನ ರುವಾಂಡ ರಾಯಭಾರಿ ವಿಲಿಯಮ್ಸ, ಗೌರವ ಕಾನ್ಸುಲ್ ಮೋಹನ್ ಸುರೇಶ್, ಲಘು ಉದ್ಯೋಗ ಭಾರತಿ ಸಂಸ್ಥೆ ಅಧ್ಯಕ್ಷ ಟಿ.ಶ್ರೀನಿವಾಸನ್, ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್.ಬಂಗೇರಾ ಮಾತನಾಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್, ಎಂಎಂ ಆಕ್ಟಿವ್ ಎಂಡಿ ಜಗದೀಶ್ ಪಾಠಂಕರ್, ಕೈಗಾರಿಕೆ-ವಾಣಿಜ್ಯ ಇಲಾಖೆ ಆಯುಕ್ತ ಎಂ.ಮಹೇಶ್ವರ ರಾವ್ ಇದ್ದರು.

ನಿರಾಣಿ ವಿಶ್ವಾಸ: ಈ ಬಾರಿಯ `ಜಿಮ್~ನಲ್ಲಿ ವಿದ್ಯುತ್ ಕ್ಷೇತ್ರಕ್ಕೆ ಅತಿ ಹೆಚ್ಚಿನ ಹೂಡಿಕೆಯಾಗುವ ಸಾಧ್ಯತೆ ಇದೆ~ ಎಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ವಸ್ತು ಪ್ರದರ್ಶನ ಉದ್ಘಾಟನೆ ನಂತರ ಪತ್ರಕರ್ತರ ಜತೆ ಮಾತನಾಡಿದ ಅವರು, `ರೂ. 6 ಲಕ್ಷ ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ವಿದ್ಯುತ್, ಮೂಲಸೌಕರ್ಯ, ಐಟಿ-ಬಿಟಿ, ವೈಮಾನಿಕ ಕ್ಷೇತ್ರ, ಆಟೊಮೊಬೈಲ್ ಉದ್ಯಮಗಳಲ್ಲಿ ಹೆಚ್ಚು ಹೂಡಿಕೆಯಾಗಲಿದೆ. ಮಧ್ಯಮ-ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ರೂ. 1 ಲಕ್ಷ ಕೋಟಿ ಹೂಡಿಕೆಯಾಗಲಿದೆ. `ಜಿಮ್ ನಿರೀಕ್ಷೆಗೂ ಮೀರಿ ಯಶಸ್ಸು ಸಾಧಿಸಲಿದೆ~ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.