ವಿಜಾಪುರ: `ಯಾವ ಚಾನೆಲ್ಗಳನ್ನು ಎಷ್ಟು ಜನ ವೀಕ್ಷಿಸುತ್ತಾರೆ ಎಂದು ನಿರ್ಧರಿಸುವ ಟೆಲಿವಿಜನ್ ರೇಟಿಂಗ್ ಪಾಯಿಂಟ್ (ಟಿಆರ್ಪಿ) ಎಂಬುದು ನಕಲಿ ಸಮೀಕ್ಷೆ. ಇದರ ವಿರುದ್ಧ ದೂರದರ್ಶನ ಆಡಳಿತ ಮಂಡಳಿ ಸಂಬಂಧಿಸಿದ ಆಯೋಗಕ್ಕೆ ದೂರು ನೀಡಿದೆ' ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ ಹೇಳಿದರು.
`ದೇಶದ 120 ಕೋಟಿ ಜನ ಯಾವ ಯಾವ ಕಾರ್ಯಕ್ರಮ ವೀಕ್ಷಿಸುತ್ತಾರೆ ಎನ್ನುವುದನ್ನು ಕೇವಲ 6,000 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿರ್ಧರಿಸಲಾಗುತ್ತಿದೆ. ರಾಜ್ಯದ ಐದಾರು ಕಡೆಗಳಲ್ಲಿ ಮಾತ್ರ ಈ ಮಾಪನಗಳನ್ನು (ಮೀಟರ್) ಹಾಕಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ವಿಜಾಪುರದಂತಹ ಜಿಲ್ಲಾ ಕೇಂದ್ರಗಳ್ಲ್ಲಲೂ ಈ ಮಾಪನ ಇಲ್ಲ' ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಲೋಕಸಭೆ ಮಾದರಿಯಲ್ಲಿ ವಿಧಾನಸಭಾ ಕಲಾಪ ಪ್ರಸಾರಕ್ಕೆ ಪ್ರತ್ಯೇಕ ಚಾನೆಲ್ ಆರಂಭಿಸುವ ಬೇಡಿಕೆ ಇದೆ. ಈ ಕುರಿತು ರಚನೆಯಾಗಿರುವ ಸಮಿತಿಯಲ್ಲಿ ನಾನೂ ಸದಸ್ಯ. ಪ್ರತ್ಯೇಕ ಚಾನೆಲ್ ಆರಂಭಿಸುವ ಇಲ್ಲವೇ ಈಗಿರುವ ದೂರದರ್ಶನ ಚಂದನ ವಾಹಿನಿಯಲ್ಲಿಯೇ ಕಲಾಪದ ನೇರ ಪ್ರಸಾರ ಮಾಡುವ ಪ್ರಸ್ತಾವ ಮುಂದಿಟ್ಟಿದ್ದೇವೆ. ಈ ಕುರಿತು ಇನ್ನೂ ಯಾವುದೇ ನಿರ್ಧಾರವಾಗಿಲ್ಲ' ಎಂದರು.
ರೂ.5 ಕೋಟಿ ಬಜೆಟ್
`ಬೆಂಗಳೂರು ದೂರದರ್ಶನ ಕೇಂದ್ರದ ವಾರ್ಷಿಕ ಬಜೆಟ್ ರೂ.25 ಕೋಟಿ. ಸಿಬ್ಬಂದಿ ವೇತನಕ್ಕೆ ರೂ.19 ಕೋಟಿ ವೆಚ್ಚವಾಗುತ್ತಿದೆ. 24 ಗಂಟೆಪ್ರಸಾರ ಮಾಡುವುದರಿಂದ ತಾಂತ್ರಿಕ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟು 249 ಸಿಬ್ಬಂದಿ ಇದ್ದಾರೆ. ಕಳೆದ ವರ್ಷ ಕಾರ್ಯಕ್ರಮಗಳಿಗೆ ರೂ.3 ಕೋಟಿ ವೆಚ್ಚ ಮಾಡಿದ್ದು, ಜಾಹೀರಾತಿನಿಂದ ರೂ.14 ಕೋಟಿ ವರಮಾನ ಬಂದಿದೆ' ಎಂದು ಜೋಶಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.