ADVERTISEMENT

ನೂಲಿನ ಗಿರಣಿಗಳಿಗೆ ಪುನಶ್ಚೇತನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ರಾಜ್ಯದಲ್ಲಿ ನಷ್ಟದಲ್ಲಿರುವ 9 ಸಹಕಾರಿ ನೂಲಿನ ಗಿರಣಿಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದು ಜವಳಿ ಸಚಿವ ಬಾಬುರಾವ್ ಚಿಂಚನಸೂರು ಮಂಗಳವಾರ ಇಲ್ಲಿ ತಿಳಿಸಿದರು.

ಸಹಕಾರಿ ನೂಲಿನ ಗಿರಣಿಗಳು ಬಾಕಿ ಉಳಿಸಿಕೊಂಡಿರುವ ರೂ165.92 ಕೋಟಿ ಅಸಲು ಮತ್ತು ಬಡ್ಡಿಯನ್ನು ಷೇರು ಬಂಡವಾಳವಾಗಿ ಪರಿವರ್ತಿಸಲಾಗುವುದು. ಕೇಂದ್ರದ ಎನ್‌ಸಿಡಿಸಿ ಟಫ್ ಯೋಜನೆಯಡಿ ದೊರೆಯುವ ಅನುದಾನವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ವಿದ್ಯಾವಿಕಾಸ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಸಿದ್ದು, ಇದರ ಬಾಬ್ತಿನ ರೂ24 ಕೋಟಿ ತಕ್ಷಣವೇ ಬಿಡುಗಡೆ ಮಾಡುವುದಾಗಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಕೈಚೀಲ ತಯಾರಿಕೆ
ಪ್ಲಾಷ್ಟಿಕ್ ಬಳಕೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಬಟ್ಟೆ ಕೈಚೀಲಗಳನ್ನು ತಯಾರಿಸಿದ್ದು, ಇದೇ 6ರಂದು ಬಿಡುಗಡೆ ಮಾಡಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸೀಮಾ ಗರ್ಗ್ ತಿಳಿಸಿದರು.

ಪ್ರಿಯದರ್ಶಿನಿ ಮಳಿಗೆಗಳಲ್ಲಿ ಆರು ಲಕ್ಷ ಪ್ಲಾಸ್ಟಿಕ್ ಬ್ಯಾಗ್‌ಗಳು ಬಳಕೆಯಾಗುತ್ತಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಅಷ್ಟೇ ಪ್ರಮಾಣದಲ್ಲಿ ಬಟ್ಟೆ ಕೈಚೀಲಗಳನ್ನು ತಯಾರಿಸಲಾಗಿದೆ. ಮೊದಲ ಹಂತದಲ್ಲಿ ಪ್ರಿಯದರ್ಶಿನಿ ಮಳಿಗೆಗಳ ಗ್ರಾಹಕರಿಗೆ ಕಡಿಮೆ ದರದಲ್ಲಿ ನೀಡಲಾಗುವುದು ಎಂದರು.

ಬಟ್ಟೆ ಕೈಚೀಲಗಳ ಬಳಕೆಯಿಂದ ನೇಕಾರರಿಗೂ ಅನುಕೂಲವಾಗಲಿದೆ. ಮಹಿಳೆಯರಿಗೆ ಉದ್ಯೋಗ ಸಿಗಲಿದೆ.ಎಂದು ನಿಗಮದ ಆಡಳಿತಾಧಿಕಾರಿ ಬಿ.ಗಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.