ಬೆಂಗಳೂರು: ಭಾರತ್ ಅರ್ಥ್ ಮೂವರ್ಸ್ ಲಿ.(ಬಿಇಎಂಎಲ್) 2011-12ನೇ ಸಾಲಿನ 4ನೇ ತ್ರೈಮಾಸಿಕದಲ್ಲಿ ರೂ14 ಕೋಟಿ ನಷ್ಟ ಅನುಭವಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರೂ70.25 ಕೋಟಿ ನಿವ್ವಳ ಲಾಭದಲ್ಲಿದ್ದ ಸಂಸ್ಥೆ, ಒಂದೇ ವರ್ಷದ ಅಂತರದಲ್ಲಿ ಲಾಭ ಗಳಿಕೆಯಲ್ಲಿ ಶೇ 80ರಷ್ಟು ಕುಸಿತ ಕಂಡಿದೆ.
ಕೈಗಾರಿಕಾ ಕ್ಷೇತ್ರದಲ್ಲಿನ ಕುಸಿತ ಮತ್ತು ಕೆಲವು ಗ್ರಾಹಕ ಸಂಸ್ಥೆಗಳ ಕೋರಿಕೆ(ಆರ್ಡರ್) ಪೂರೈಸಲಾಗದೇ ಹೋಗಿದ್ದು ಇಷ್ಟು ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಯಿತೆಂದು ಬಿಇಎಂಎಲ್ ಅಧ್ಯಕ್ಷ-ವ್ಯವಸ್ಥಾಪಕ ನಿರ್ದೇಶಕ ವಿ.ಆರ್.ಎಸ್.ನಟರಾಜನ್ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರೂ100 ಕೋಟಿ ಮೊತ್ತದ ರಫ್ತು ಕೋರಿಕೆ ಸಹ ಪೂರ್ಣಗೊಳಿಸಲಾಗಲಿಲ್ಲ. ಗಣಿಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ರೂ200 ಕೋಟಿ, ಮೆಟ್ರೊ ವಿಭಾಗದ ರೂ150 ಕೋಟಿ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸಿದ ರೂ80 ಕೋಟಿಯ ಬೇಡಿಕೆಗಳನ್ನೂ ಈಡೇರಿಸಲಾಗಲಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸಿದರು.
ಸದ್ಯ ವಿವಾದಕ್ಕೆ ಈಡಾಗಿರುವ `ಟೆಟ್ರಾ ಟ್ರಕ್~ ಕುರಿತ ಪ್ರಶ್ನೆಗೆ, `ಈ ಟ್ರಕ್ ಒಂದೇ ಬಿಇಎಂಎಲ್ನ ವರಮಾನದ ಮೂಲವಲ್ಲ~ ಎಂದು ಪ್ರತಿಕ್ರಿಯಿಸಿದರು.
ವಹಿವಾಟು ಗಾತ್ರವನ್ನು ಈ ವರ್ಷ ರೂ5000 ಕೋಟಿಗೆ, 2018-19ರ ವೇಳೆಗೆ ರೂ10000 ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನೂ ಹೊಂದಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.