ADVERTISEMENT

ಮಣಪ್ಪುರಂ ಫೈನಾನ್ಸ್‌ನಲ್ಲಿ ಠೇವಣಿ: ಆರ್‌ಬಿಐ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ): ಕೇರಳ ಮೂಲದ ಮಣಪ್ಪುರಂ ಫೈನಾನ್ಸ್‌ನಲ್ಲಿ ಠೇವಣಿ ಇಡುವುದರ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಮಣಪ್ಪುರಂ ಫೈನಾನ್ಸ್ ಲಿಮಿಟೆಡ್ ಅಥವಾ ಇದೇ ಸಮೂಹದ ಅಂಗ ಸಂಸ್ಥೆಯಾಗಿರುವ ಮಣಪ್ಪುರಂ ಅಗ್ರೊ ಫಾರ್ಮ್ಸನಲ್ಲಿ  (ಎಂಎಜಿಆರ್‌ಒ) ಠೇವಣಿ ಇಟ್ಟರೆ ಅದಕ್ಕೆ ಸಾರ್ವಜನಿಕರೇ ಹೊಣೆಗಾರರು ಎಂದೂ `ಆರ್‌ಬಿಐ~ ತಿಳಿಸಿದೆ.    ಮಣಪ್ಪುರಂ ಫೈನಾನ್ಸ್ ಸಂಸ್ಥೆಯು, ಠೇವಣಿ ಇರಿಸಿಕೊಳ್ಳದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವುದರಿಂದ, ಸಾರ್ವಜನಿಕರಿಂದ ಠೇವಣಿಗಳನ್ನು ಇರಿಸಿಕೊಳ್ಳುವಂತಿಲ್ಲ. ಹಾಗೆ ಮಾಡಲು ಕಾಯ್ದೆ ಪ್ರಕಾರ ಅವಕಾಶವೂ ಇಲ್ಲ. ಹೀಗೆ ಠೇವಣಿ ಇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು `ಆರ್‌ಬಿಐ~ ತಿಳಿಸಿದೆ.

ಕೇರಳದ ತ್ರಿಶ್ಯೂರ್ ಮೂಲದ, ಈ ಮೊದಲಿನ ಮಣಪ್ಪುರಂ ಜನರಲ್ ಫೈನಾನ್ಸ್ ಆಂಡ್ ಲೀಸಿಂಗ್ ಲಿಮಿಟೆಡ್‌ಗೆ `ಆರ್‌ಬಿಐ~ ಕಾಯ್ದೆ 1934ರ ಅನ್ವಯ, ಠೇವಣಿಗಳನ್ನು ಸ್ವೀಕರಿಸಲು ಅಥವಾ ನವಿಕರಿಸಲು ಅವಕಾಶ ಇಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ. ಮಣಪ್ಪುರಂ ಫೈನಾನ್ಸ್, ಇದಕ್ಕೂ ಮೊದಲು `ಆರ್‌ಬಿಐ~ನಲ್ಲಿ ಠೇವಣಿ ಸ್ವೀಕರಿಸುವ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ ನೋಂದಣಿ ಮಾಡಿಕೊಂಡಿತ್ತು.
 
2011ರ ಮಾರ್ಚ್‌ನಲ್ಲಿ  ಠೇವಣಿ ಸ್ವೀಕರಿಸದ ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿ ಪರಿವರ್ತನೆಗೊಂಡಿತ್ತು. ಕೆಲ ಪ್ರಕರಣಗಳಲ್ಲಿ ಅವಧಿ ಪೂರ್ಣಗೊಂಡ ಠೇವಣಿಗಳ ಹಣ ಮರಳಿಸದೇ, ಸ್ಥಿರ ಠೇವಣಿಗಳ ರಸೀದಿ ನೀಡುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು `ಆರ್‌ಬಿಐ~ ತಿಳಿಸಿದೆ.

10ರಂದು ಸಭೆ: ನಿಯಮಬಾಹಿರವಾಗಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುತ್ತಿರುವ ಬಗ್ಗೆ `ಆರ್‌ಬಿಐ~ ನೀಡಿರುವ ಎಚ್ಚರಿಕೆ ಹಿನ್ನೆಲೆಯಲ್ಲಿ, ಮಣಪ್ಪುರಂ ಫೈನಾನ್ಸ್‌ನ ಆಡಳಿತ ಮಂಡಳಿಯು ಇದೇ 10ರಂದು ಸಭೆ ಸೇರಿ ಚರ್ಚಿಸಲಿದೆ.

ಸುರಕ್ಷಿತ ಮತ್ತು ಪರಿವರ್ತಿಸಲಾಗದ ಸಾಲಪತ್ರಗಳನ್ನು  (ಡಿಬೆಂಚರ್) ಮಾತ್ರ ಸಾರ್ವಜನಿಕರಿಂದ ಸಂಗ್ರಹಿಸಲಾಗುತ್ತಿದೆ. ಇವು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.