ನವದೆಹಲಿ: ರಾಜ್ಯದ ತೊಗರಿ ಬೆಳೆಗಾರರಿಂದ ಮಾರ್ಚ್ 28ರವರೆಗೆ ಕನಿಷ್ಠ ಬೆಂಬಲ ಬೆಲೆ ಅಡಿ ತೊಗರಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ತೊಗರಿ ಖರೀದಿ ಪ್ರಕ್ರಿಯೆ ದಿನಾಂಕ ವಿಸ್ತರಿಸುವಂತೆ ಕೋರಿ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಅವರು ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಗುರುವಾರ ಬೆಳಿಗ್ಗೆ ಪತ್ರ ಬರೆದು ಮನವಿ ಮಾಡಿದ್ದರು.
ರಾಜ್ಯ ಸರ್ಕಾರದ ಮನವಿಯ ಮೇರೆಗೆ ಹೆಚ್ಚುವರಿಯಾಗಿ ಒಂದು ಲಕ್ಷ ಟನ್ ತೊಗರಿ ಖರೀದಿಸಲು ಮಾರ್ಚ್ 6ರಂದು ಅನುಮತಿ ನೀಡಿದ್ದ ಕೃಷಿ ಸಚಿವರು, ಮಾರ್ಚ್ 28ರವರೆಗೂ ಖರೀದಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
2.64 ಲಕ್ಷ ಟನ್ ತೊಗರಿ ಖರೀದಿಸಲು ಅನುಮತಿ ನೀಡಿ ಕಳೆದ ಡಿಸೆಂಬರ್ 12ರಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, 90 ದಿನಗಳಲ್ಲಿ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
90 ದಿನಗಳ ಕಾಲಾವಕಾಶವು ಮಾರ್ಚ್ 12ಕ್ಕೆ ಪೂರ್ಣಗೊಂಡಿದ್ದು, ಹೆಚ್ಚುವರಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಖರೀದಿ ಪ್ರಕ್ರಿಯೆಯ ದಿನಾಂಕ ವಿಸ್ತರಿಸುವಂತೆ ಕೋರಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.