ADVERTISEMENT

ರತನ್ ಟಾಟಾಗೆ ನಾಯಕತ್ವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ನಿಜವಾದ ನಾಯಕನಾದವನ ವ್ಯಕ್ತಿತ್ವವು, ತಾನು ಸೇವೆ ಸಲ್ಲಿಸಿದ ಜನರ ಬದುಕಿನ ಗುಣಮಟ್ಟ ಸುಧಾರಿಸುವಂತಿರಬೇಕು ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅಭಿಪ್ರಾಯಪಟ್ಟಿದ್ದಾರೆ.

`ಅಸಾಧಾರಣ ನಾಯಕತ್ವ~ಕ್ಕಾಗಿ ಇರುವ ಸ್ವಿಟ್ಜರ್‌ಲೆಂಡ್ ರಾಯಭಾರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಟಾಟಾ ಸಮೂಹವು ರತನ್ ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವಾಗ ರತನ್, ಈ ಅನಿಸಿಕೆ ವ್ಯಕ್ತಪಡಿಸ್ದ್ದಿದಾರೆ. ರತನ್ ಟಾಟಾ 2012ರ ಡಿಸೆಂಬರ್‌ನಲ್ಲಿ ನಿವೃತ್ತರಾಗಲಿದ್ದಾರೆ.

ಟಾಟಾ ಸಮೂಹಕ್ಕೆ ನಾನು ಏಕಾಂಗಿಯಾಗಿ ಸೇವೆ ಸಲ್ಲಿಸಿಲ್ಲ. ನನ್ನ ಸುತ್ತಮುತ್ತಲೂ ಇರುವ ಇತರರ ನೆರವಿನಿಂದಲೇ ಸಂಸ್ಥೆಯ ಒಳಿತಿಗೆ ಶ್ರಮಿಸಿದ್ದೇನೆ. ಟಾಟಾ ಸಮೂಹದ ವಹಿವಾಟು ಪ್ರಗತಿಗೆ ನನ್ನ ಸಹೋದ್ಯೋಗಿಗಳು, ಉಪ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ (ಸಿಇಒ) ಮುಖ್ಯ ಕಾರಣ.  ನನ್ನ ಹಿರಿಯರು ಸಾಗಿದ ಮಾರ್ಗದಲ್ಲಿಯೇ ನಾನು ನಡೆದಿರುವೆ.

ಅಲ್ಪಾವಧಿ  ಲಾಭಗಳ ಬಗ್ಗೆ ವಿಶ್ಲೇಷಕರು ಮತ್ತು ಹಣಕಾಸು ಸಮುದಾಯ ಆಮಿಷ ಒಡ್ಡುತ್ತಿರುವುದು ದುರದೃಷ್ಟಕರ.  ಹೀಗೆ ಚಿಂತಿಸುವುದು ಎಂದರೆ ದೀರ್ಘಾವಧಿಯ ಪ್ರಯೋಜನಗಳನ್ನು ಬಲಿಗೊಟ್ಟಂತೆಯೇ ಸರಿ. ಭಾರತವು ಸಮಾನ ಅವಕಾಶಗಳ ದೇಶವಾಗಿರಬೇಕು ಎನ್ನುವುದೂ  ನನ್ನ  ಆಶಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.