ADVERTISEMENT

ರೈಲು ಪ್ರಯಾಣ ದರ ಹೆಚ್ಚಳ:ಡಿ.31ಗಡುವು

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ನವದೆಹಲಿ (ಪಿಟಿಐ): ರೈಲ್ವೆ ಪ್ರಯಾಣ ದರ ಹೆಚ್ಚಳ ಸಂಬಂಧ ರೈಲ್ವೆ ದರ ಪ್ರಾಧಿಕಾರವು ನೀಡಿರುವ ಸಲಹೆಗಳನ್ನು ಅಂತಿಮಗೊಳಿಸುವಂತೆ ಪ್ರಧಾನಿ ಅಂತರ ಸಚಿವಾಲಯ ಸಮಿತಿಗೆ ಡಿ.31ರ ಗಡುವು ನೀಡಿದ್ದಾರೆ. ಕಳೆದ 9 ವರ್ಷಗಳಿಂದ ರೈಲ್ವೆ ಪ್ರಯಾಣ ದರ ಹೆಚ್ಚಳವಾಗಿಲ್ಲ.

ರೈಲ್ವೆ ಮಂಡಳಿ ಅಧ್ಯಕ್ಷರ ಅಧೀನದ ಐಎಂಜಿಯು, ರೈಲ್ವೆ ದರ ಹೆಚ್ಚಳ ಸಂಬಂಧದ ಶಿಫಾರಸುಗಳನ್ನು ಅಂತಿಮಗೊಳಿಸಿ ಇದೇ 31ರೊಳಗೆ ಸಲ್ಲಿಸುವಂತೆ ಇಲ್ಲಿ ನಡೆದ ಸಾರಿಗೆ ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಸಿಂಗ್ ಸೂಚಿಸಿರುವುದಾಗಿ ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

2012-13ರ ರೈಲ್ವೆ ಬಜೆಟ್‌ನಲ್ಲಿ ರೈಲ್ವೆ ದರ ಪ್ರಾಧಿಕಾರ ರಚನೆ ಬಗ್ಗೆ ಪ್ರಸ್ತಾಪಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಇಂಧನ ಸೇರಿದಂತೆ ವೆಚ್ಚಗಳು ಅಧಿಕಗೊಂಡಿದ್ದು, ಇದನ್ನು ಸರಿದೂಗಿಸಲು ಪ್ರಯಾಣ ದರ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ. ಪ್ರಸಕ್ತ ರೈಲ್ವೆ ಪ್ರಯಾಣ ದರ ನೀತಿಯಿಂದ 24 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವನ್ನು ರೈಲ್ವೆ ಇಲಾಖೆ ಅನುಭವಿಸುತ್ತಿದೆ.

ADVERTISEMENT

`ಗಮೋಚಾ' ಆಮದು  ನಿಲ್ಲಿಸಿದ ಅಸ್ಸಾಂ ಸರ್ಕಾರ
ಗುವಾಹಟಿ (ಪಿಟಿಐ): ಸ್ಥಳೀಯ ನೇಕಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಸ್ಸಾಂ ಸರ್ಕಾರವು ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಿದ್ಧವಾಗುವ ಹತ್ತಿಯ ಟವಲುಗಳ (ಗಮೋಚಾ) ಖರೀದಿ ನಿಲ್ಲಿಸಿದೆ.

`ಬೆಂಗಳೂರು ಹಾಗೂ ಚೆನ್ನೈ ಸೇರಿದಂತೆ ಹೊರಗಿನಿಂದ `ಗಮೋಚಾ' ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದ್ದೇವೆ. ಸಂಪುಟದ ಉಪ ಸಮಿತಿ ಇದನ್ನು ಅನುಮೋದಿಸಿದೆ' ಎಂದು ಅಸ್ಸಾಂ ರಾಜ್ಯದ ಸಂಸ್ಕೃತಿ ಸಚಿವೆ ಪ್ರಣತಿ ಫುಕನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.