ADVERTISEMENT

ವಿತ್ತೀಯ ಕೊರತೆಗೆ ಕಡಿವಾಣ ಕಠಿಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ ಶೇ 4.6ಕ್ಕೆ ಮಿತಗೊಳಿಸುವ ಗುರಿ ತಲುಪುವಲ್ಲಿ  ಸರ್ಕಾರ ವಿಫಲಗೊಳ್ಳುವ ಸಾಧ್ಯತೆಗಳಿವೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ವೃದ್ಧಿ ದರವು ಸಾಧಾರಣ ಮಟ್ಟದಲ್ಲಿ ಇರುವುದರಿಂದ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 4.6ಕ್ಕೆ ಮಿತಿಗೊಳಿಸಲು ಸಾಧ್ಯವಾಗಲಾರದು ಎಂದರು. ಭಾರತದ ಆರ್ಥಿಕ ಸೇವೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

 ಕೃಷಿ ವಲಯದ ವೃದ್ಧಿ ದರವು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೂ, ಈ ವರ್ಷ ಅನೇಕ  ಪ್ರತಿಕೂಲ ಕಾರಣಗಳಿಗೆ `ಜಿಡಿಪಿ~ ದರ ಶೇ 8ರ ಮಟ್ಟದಲ್ಲಿಯೇ ಇರಲಿದೆ. ಅಲ್ಪಾವಧಿಯಲ್ಲಿನ ಹಣದುಬ್ಬರ, ಹಣ ಪಾವತಿ ಸಮತೋಲನ ಮತ್ತು ವರಮಾನ ವೃದ್ಧಿ ಸವಾಲುಗಳು ಉದ್ದೇಶಿತ  ಆರ್ಥಿಕ ಬೆಳವಣಿಗೆ ಸಾಧಿಸಲು ಅಡ್ಡಿಯಾಗಿವೆ ಎಂದು ವಿಶ್ಲೇಷಿಸಿದರು.

ಹಣದುಬ್ಬರಕ್ಕೆ ಸರಕುಗಳ ಪೂರೈಕೆ ಸಮಸ್ಯೆ ಅಡಚಣೆಯಾಗಿದ್ದರೂ, ಇಲ್ಲಿ ಹಣಕಾಸು ಕ್ರಮಗಳೂ ಮಹತ್ವದ ಪಾತ್ರ ನಿರ್ವಹಿಸಲಿವೆ. ಹೀಗಾಗಿ ಬೆಲೆ ಏರಿಕೆ ಸಮಸ್ಯೆಗೆ ಕಡಿವಾಣ ವಿಧಿಸಲು ಹಣಕಾಸು ನೀತಿಯು ಮಹತ್ವದ ಪಾತ್ರ  ನಿರ್ವಹಿಸುತ್ತದೆ ಎಂದು ರಂಗರಾಜನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.