ADVERTISEMENT

ಸಂಧಾನಕ್ಕೆ ಒಪ್ಪಿದರೆ ಬೀಗಮುದ್ರೆ ತೆರವು

ಟೋಯೊಟಾ ಕಿರ್ಲೋಸ್ಕರ್‌ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST
ಬೆಂಗಳೂರು: ಕಂಪೆನಿಯ ಆಡಳಿತ ಮಂಡಳಿ  ಮುಂದಿಟ್ಟಿರುವ ಸಂಧಾನ ಸೂತ್ರಗಳಿಗೆ ಕಾರ್ಮಿಕ ಸಂಘ ಒಪ್ಪಿಕೊಂಡಲ್ಲಿ ಬಿಡದಿ ಬಳಿಯ ಕಾರು ತಯಾರಿಕಾ ಘಟಕದ ‘ಲಾಕ್‌ಔಟ್‌’ ಕೊನೆಗೊಳ್ಳಲಿದೆ ಎಂದು ಟೋಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ. (ಟಿಕೆಎಂಪಿಎಲ್‌) ಮಾನವ ಸಂಪ ನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾ ಪಕ ಪದ್ಮನಾಭ್‌ ಹೇಳಿದರು.

ಇಲ್ಲಿ ಸೋಮವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಅವರು, 2013; 14ನೇ ಹಣಕಾಸು ವರ್ಷದಲ್ಲಿ ₨8000 ವೇತನ ಹೆಚ್ಚಿಸಬೇಕು, ವಾರ್ಷಿಕ 278 ಕೆಲಸದ ದಿನಗಳನ್ನು 273ಕ್ಕೆ ಇಳಿಸಬೇಕು ಎಂಬುದು ಕಾರ್ಮಿಕರ ಬೇಡಿಕೆ. ಇದಕ್ಕೆ ಸಂಬಂಧಿಸಿದಂತೆ 50 ಸಭೆಗಳು ನಡೆದು ₨2650ರಷ್ಟು ವೇತನ ಹೆಚ್ಚಳ, 275 ಕೆಲಸದ ದಿನಗಳಿಗೆ ಆಡಳಿತ ಮಂಡಳಿ ಒಪ್ಪಿದೆ.

ಕಾರ್ಮಿಕರಿಗೆ ಇದು ಒಪ್ಪಿಗೆಯಾಗದ ಕಾರಣ ಕಾರ್ಮಿಕ ಇಲಾಖೆ ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ 7 ಸಭೆಗಳು ನಡೆದು ಕೊನೆಗೆ ₨3050ರಷ್ಟು ವೇತನ ಹೆಚ್ಚಳಕ್ಕೆ ಕಂಪೆನಿ ಒಪ್ಪಿಕೊಂಡಿತು. ಇದಕ್ಕೂ ಒಪ್ಪದ ಕಾರ್ಮಿಕರು ಒಂದು ತಿಂಗಳಿಂದ ನಿಧಾನಗತಿ ಕೆಲಸ ನಡೆಸುತ್ತಿ ದ್ದಾರೆ.  ಜತೆಗೆ ಸೂಪರ್‌ವೈಸರ್‌ಗಳ ಜತೆ ಕಾರ್ಮಿಕ ಸಂಘದವರ ಜಗಳ, ಬೆದರಿಕೆ ಹಾಕುವುದೂ ನಡೆದಿದೆ. ಹಾಗಾಗಿ, ಲಾಕ್‌ಔಟ್ ಘೋಷಣೆ ಅನಿ ವಾರ್ಯವಾಯಿತು ಎಂದು ಹೇಳಿದರು.

ಕಳೆದ ಎರಡು ವರ್ಷಗಳಿಂದ ದೇಶದ ವಾಹನ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಟೋಯೊಟಾ ಕಿರ್ಲೋಸ್ಕರ್ ಕಾರು ಮಾರಾಟವೂ ದೇಶೀಯ ಮಾ­ರು­­­ಕಟ್ಟೆ­ಯಲ್ಲಿ ಶೇ15ರಷ್ಟು ಕುಸಿ­ದಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಬೇಡಿಕೆ­ಯಷ್ಟು ವೇತನ ಹೆಚ್ಚಳ ಸಾಧ್ಯವಾ­ಗುತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿ­ಸಿದರು.

2006ರಲ್ಲಿಯೂ ಮುಷ್ಕರಕ್ಕಿಳಿದ ಕಾರ್ಮಿಕರು ಸ್ಫೋಟದ ಬೆದರಿಕೆ ಹಾಕಿ ದ್ದರಿಂದ ಲಾಕ್‌ಔಟ್‌ ಘೋಷಿಸಲಾ ಗಿತ್ತು. 26 ಕಾರ್ಮಿಕರನ್ನು ಅಮಾನತು ಗೊಳಿಸಲಾಗಿತ್ತು  ಎಂದರು.

ಕಾರು ತಯಾರಿಕೆ ಕುಸಿತ
ಬಿಡದಿಯಲ್ಲಿನ 2 ಘಟಕಗಳಲ್ಲಿ ಇನ್ನೋವಾ, ಫಾರ್ಚ್ಯೂನ್‌, ಇಟಿ­ಯೋಸ್‌ ಸೇರಿದಂತೆ ದಿನಕ್ಕೆ ಒಟ್ಟು  540 ಕಾರುಗಳು ತಯಾರಾಗುತ್ತವೆ.  ಕಳೆದೊಂದು ತಿಂಗಳಿಂದ ಕಾರ್ಮಿಕರು ನಿದಾನಗತಿ ಕೆಲಸ ನಡೆಸುತ್ತಿರುವುದ ರಿಂದ ಕಾರುಗಳ ತಯಾರಿಕೆ ಶೇ 30 ರಷ್ಟು ಕಡಿಮೆಯಾಗಿದೆ. 500 ಕಾರು­ಗಳು ಸಂಗ್ರಹದಲ್ಲಿವೆ. ವಿತರ­ಕರಿಗೆ, ಗ್ರಾಹಕರಿಗೆ ಕೆಲವು ದಿನ ಕಾರು ಪೂರೈಕೆ ಮುಂದುವರಿಯಲಿದೆ ಎಂದರು.

ಕಾರ್ಯದರ್ಶಿ ನೇತೃತ್ವದ ಸಭೆ ಇಂದು
ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಪ್ರೈ.ಲಿ. ಲಾಕ್‌ಔಟ್‌ ಘೋಷಿಸಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಅವರು ಮಂಗಳವಾರ ಕಂಪೆನಿಯ ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘದ ಪ್ರತಿನಿಧಿಗಳ ಸಭೆಯನ್ನು ಕರೆದಿದ್ದಾರೆ.
ಸಚಿವರ ಕೊಠಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಸಭೆ ನಡೆಯಲಿದೆ. ಕಾರ್ಮಿಕ ಸಚಿವ ಪರಮೇ ಶ್ವರ್‌ ನಾಯಕ್‌ ಅವರೂ ಉಪಸ್ಥಿತರಿರುವ ಸಾಧ್ಯತೆ ಇದೆ ಎಂದು ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪೆನಿಯ ಕಾರ್ಮಿಕ ಸಂಘಟನೆ ಅಧ್ಯಕ್ಷ ಪ್ರಸನ್ನ ಕುಮಾರ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ಕಾರ್ಮಿಕರು ಕನಿಷ್ಠ ₨4000ದಷ್ಟಾದರೂ ವೇತನ ಹೆಚ್ಚಿಸುವಂತೆ ಒತ್ತಾಯಿ ಸಿದರೂ ಆಡಳಿತ ಮಂಡಳಿ ಒಪ್ಪುತ್ತಿಲ್ಲ. 2012–13ನೇ ಹಣಕಾಸು ವರ್ಷದ ಲ್ಲಿಯೇ ₨4000 ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ ಒಪ್ಪಿಕೊಂಡಿತ್ತು. ಆದರೆ, ಒಪ್ಪಿದ್ದಕ್ಕಿಂತ ಕಡಿಮೆ ಪ್ರಮಾಣದ ವೇತನ ಹೆಚ್ಚಳದ ಷರತ್ತು ಮುಂದಿಡುತ್ತಿದೆ ಎಂದು ಕಾರ್ಮಿಕ ಸಂಘಟನೆ ಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.