ಗುಡಗಾಂವ್ (ಪಿಟಿಐ): `ಸಬ್ಸಿಡಿ ಸೋರಿಕೆ ಬಗ್ಗೆ ಯೋಚಿಸುವಾಗಲೆಲ್ಲ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತೇನೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಭಾನುವಾರ ಇಲ್ಲಿ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ `ಆರ್ಥಿಕ ಸೇರ್ಪಡೆ~ಗೆ ಸಂಬಂಧಿಸಿದಂತೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. `ದೊಡ್ಡ ಪ್ರಮಾಣದ ಸಬ್ಸಿಡಿ ಮೊತ್ತವು ಬಡವರನ್ನು ತಲುಪದೆ ಸೋರಿಕೆಯಾಗುತ್ತಿದೆ. ಈ ಹಣವು ಸೂಕ್ತ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದು ಅತ್ಯಂತ ಕಳವಳಕಾರಿ ಸಂಗತಿ. ಸಬ್ಸಿಡಿಗಾಗಿ ಸರ್ಕಾರ ಗರಿಷ್ಠ ಮೊತ್ತ ವ್ಯಯಿಸುತ್ತಿದ್ದರೂ, ಇದು ಪೋಲಾಗುತ್ತಿದೆ ಎಂದು ಯೋಚಿಸುವಾಗ, ವಿತ್ತ ಸಚಿವನಾಗಿ ನನಗೆ ರಾತ್ರಿ ನಿದ್ರೆಯೇ ಬರುವುದಿಲ್ಲ~ ಎಂದು ಹೇಳಿದ್ದಾರೆ.
ವಿವಿಧ ವಿತ್ತೀಯ ಸೇರ್ಪಡೆ ಯೋಜನೆಗಳಲ್ಲಿ ಬಡವರು ಮತ್ತು ಗ್ರಾಮೀಣ ಪ್ರದೇಶಗಳ ಜನತೆಯನ್ನೂ ಪಾಲುದಾರರನ್ನಾಗಿ ಮಾಡಿಕೊಳ್ಳಬೇಕು. ಬ್ಯಾಂಕಿಂಗ್ ಮತ್ತು ಆರ್ಥಿಕ ವಿಸ್ತರಣೆ ಲಾಭಗಳು ಪ್ರತಿಯೊಬ್ಬರಿಗೂ ಲಭಿಸಬೇಕು ಎಂದರು. ರಾಷ್ಟ್ರೀಯ ವಿಶಿಷ್ಠ ಗುರುತಿನ ಸಂಖ್ಯೆ `ಆಧಾರ್~ ಮೂಲಕ ಸಬ್ಸಿಡಿ ವ್ಯಾಪ್ತಿಗೆ ಬರುವ ನೈಜ ಫಲಾನುಭವಿಗಳನ್ನು ಗುರುತಿಸಬಹುದು. ಈ ಮೂಲಕ ಸಬ್ಸಿಡಿ ಸೋರಿಕೆ ತಡೆಗಟ್ಟಬಹುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.