ADVERTISEMENT

ಸಾಲಕ್ಕೆ ಮಿತಿ: ಕೇಂದ್ರಕ್ಕೆ ಸುಬ್ಬರಾವ್ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ):  ಮುಕ್ತ ಮಾರುಕಟ್ಟೆಯಲ್ಲಿ ಎತ್ತುವ ಸಾಲವು ಆರ್ಥಿಕ ಅಭಿವೃದ್ಧಿಗೆ ಅಡಚಣೆ ಒಡ್ಡುವುದರಿಂದ ಅದಕ್ಕೊಂದು ಮಿತಿ ವಿಧಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.

ಆಂತರಿಕ ಸಾಲದ ಮೇಲೆ ಅತಿಯಾದ ಅವಲಂಬನೆಯು ಹೆಚ್ಚು ಹಾನಿಕಾರಕವಾದದ್ದು. ಸಾಲ ಸಂಗ್ರಹಿಸುವುದಕ್ಕೂ ಒಂದು ಮಿತಿ ಇದೆ.  ಅದರಾಚೆಗೂ ಕೈಚಾಚಿದರೆ ವಿತ್ತೀಯ ಕೊರತೆಯು ಆರ್ಥಿಕ ಬೆಳವಣಿಗೆಗೆ ಪ್ರತಿಕೂಲಕರವಾಗಿ ಪರಿಣಮಿಸುವುದು. ಸರ್ಕಾರ ಸಾಲ ಸಂಗ್ರಹಿಸುವುದು ತಪ್ಪೇನೂ ಅಲ್ಲ. ಆದರೆ, ಅತಿಯಾದ ಪ್ರಮಾಣದಲ್ಲಿ ಸಾಲ ಎತ್ತುವುದು ಜಾಣತನದ ನಿರ್ಧಾರವಲ್ಲ. ಒಟ್ಟು ಆಂತರಿಕ ಉತ್ಪಾದನೆಗೆ ಪೂರಕವಾಗಿ ಸರ್ಕಾರಿ ಸಾಲಕ್ಕೆ ಒಂದು ನಿರ್ದಿಷ್ಟ ಮಿತಿ ನಿಗದಿಪಡಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಧ್ಯಕ್ಷ ಡಿ. ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿ ನಡೆದ ಅಂತರರಾಷ್ಟ್ರೀಯ ಸಂಶೋಧನಾ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ವಿತ್ತೀಯ ಕೊರತೆಯು `ಜಿಡಿಪಿ~ಯ ಶೇ 4.6ರಷ್ಟು ಇರಲಿದೆ ಎನ್ನುವ ಬಜೆಟ್ ಅಂದಾಜನ್ನು ಮೀರಲಿದೆ.  ಬೊಕ್ಕಸಕ್ಕೆ ಹರಿದು ಬರುವ      ವರಮಾನ ಖೋತಾ ಆಗಿರುವುದು ಮತ್ತು ಸಬ್ಸಿಡಿ ಮೊತ್ತವು ಮೂಲ ಅಂದಾಜಿಗಿಂತ ರೂ 1 ಲಕ್ಷದಷ್ಟು ಹೆಚ್ಚಳಗೊಂಡಿರುವುದು ಇದಕ್ಕೆ ಕಾರಣ. ವರಮಾನ ಮತ್ತು ವೆಚ್ಚದ ಮಧ್ಯದ ಅಂತರ ತಗ್ಗಿಸಲು, ಸರ್ಕಾರವು ಬಜೆಟ್‌ನಲ್ಲಿ ಅಂದಾಜು ಮಾಡಿದ ರೂ  4.20 ಲಕ್ಷ ಕೋಟಿಗಳ ಮಿತಿಗಿಂತ ರೂ 92 ಸಾವಿರ ಕೋಟಿಗಳಷ್ಟು ಹೆಚ್ಚು ಸಾಲ ಎತ್ತಲಿದೆ.

2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ವಿತ್ತೀಯ ಕೊರತೆಗೆ ಕಡಿವಾಣ ವಿಧಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.