
ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ವಾರ ಮುಂಬೈ ಷೇರುಪೇಟೆ (ಬಿಎಸ್ಇ) ಸಂವೇದಿ ಸೂಚ್ಯಂಕ ತೀವ್ರ ಏರಿಳಿತ ಕಾಣುವ ಸಾಧ್ಯತೆ ಇದೆ.
ಬಜೆಟ್ ನಂತರದ ಬೆಳವಣಿಗೆಗಳು ವಿಶೇಷವಾಗಿ, ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ ಸಂಬಂಧಿಸಿದಂತೆ ಮಹಾಲೇಖಪಾಲರ ಕರಡು ವರದಿ ಕಳೆದ ವಾರಾಂತ್ಯದಲ್ಲಿ ಷೇರುಪೇಟೆಯಲ್ಲಿ ತಲ್ಲಣ ಮೂಡಿಸಿದೆ. ಈ ಸಂಗತಿಗಳ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಸೂಚ್ಯಂಕ 104 ಅಂಶಗಳನ್ನು ಕಳೆದುಕೊಂಡಿತ್ತು.
ಇರಾನ್ ಪರಮಾಣು ವಿವಾದ ಹಿನ್ನೆಲೆಯಲ್ಲಿ ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ಪರಾಮರ್ಶೆ ಕೂಡ ಹೂಡಿಕೆದಾರರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಇದರಿಂದ ಸದ್ಯ ಅಂತರರಾಷ್ಟ್ರೀಯ ಬೆಳವಣಿಗೆಗಳು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್ಐಐ) ಚಟುವಟಿಕೆಯತ್ತ ಷೇರುಪೇಟೆ ಹೆಚ್ಚಿನ ಗಮನಹರಿಸಿದೆ.
ಜಾಗತಿಕ ಷೇರುಪೇಟೆಗಳಲ್ಲಿನ ನಿರುತ್ಸಾಹದಿಂದ ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಮಂದಗತಿಯ ವಹಿವಾಟು ಕಾಣಬಹುದು ಎಂದು ಯೂನಿಕಾನ್ ಪೈನಾಶ್ಶಿಯಲ್ ಸರ್ವೀಸಸ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜೇಂದ್ರ ನಾಗ್ಪಾಲ್ ಅಭಿಪ್ರಾಯಪಟ್ಟಿದ್ದಾರೆ.
ಸಗಟು ಹಣದುಬ್ಬರ ದರ ಮತ್ತೆ ಹೆಚ್ಚಿರುವ ಹಿನ್ನೆಲೆಯಲ್ಲಿ, `ಆರ್ಬಿಐ~ ಏಪ್ರಿಲ್ನಲ್ಲಿ ಪ್ರಕಟಿಸಲಿರುವ ಹಣಕಾಸು ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸುವುದಿಲ್ಲ ಎನ್ನುವ ಮಾರುಕಟ್ಟೆ ವಿಶ್ಲೇಷಣೆಗಳು ನಡೆಯುತ್ತಿವೆ. ಸೇವಾ ತೆರಿಗೆ, ಅಬಕಾರಿ ತೆರಿಗೆ, ಚಿನ್ನದ ಆಮದು ತೆರಿಗೆ ಹೆಚ್ಚಿಸಿರುವುದರ ಪರಿಣಾಮಗಳು ಮುಂಬರುವ ದಿನಗಳಲ್ಲಿ ಕಾಣಿಸಿಕೊಳ್ಳಲಿವೆ ಎಂದು ಬೊನಂಜ ಪೋರ್ಟ್ಪೊಲಿಯೊ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಕೇಶ್ ಗೋಯಲ್ ಹೇಳಿದ್ದಾರೆ.
ದೇಶದ ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್ಡಿಐ) ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಬಜೆಟ್ನಲ್ಲಿ ಯಾವುದೇ ನಿರ್ಧಾರ ಪ್ರಕಟಿಸಿದಿರುವುದು ಕೂಡ ಹೂಡಿಕೆದಾರರಲ್ಲಿ ನಿರಾಸೆ ಮೂಡಿಸಿದೆ.ಹಣದುಬ್ಬರ ಮತ್ತು ಕಚ್ಚಾ ತೈಲದ ಬೆಲೆ ಹೆಚ್ಚಿರುವುದರಿಂದ ವಿತ್ತೀಯ ಕೊರತೆ ಅಂತರ ಹೆಚ್ಚಲಿದ್ದು, ಇದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.