ADVERTISEMENT

ಹಣದುಬ್ಬರ ನಿಗ್ರಹಕ್ಕೆ ಇನ್ನಷ್ಟು ಕ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 13:00 IST
Last Updated 31 ಡಿಸೆಂಬರ್ 2010, 13:00 IST

ಬೆಂಗಳೂರು: ‘ಹಣದುಬ್ಬರವು ಯಾವಾಗಲೂ ಆತಂಕಕ್ಕೆ  ಎಡೆ ಮಾಡಿಕೊಡುತ್ತಿದ್ದು, ಅದಕ್ಕೆ ಕಡಿವಾಣ ವಿಧಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಡೆಪ್ಯುಟಿ ಗವರ್ನರ್ ಕೆ. ಸಿ. ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.

ಏರುತ್ತಿರುವ ಆಹಾರ ಹಣದುಬ್ಬರಕ್ಕೆ  ಕಡಿವಾಣ ವಿಧಿಸಲು ಕೇಂದ್ರೀಯ ಬ್ಯಾಂಕ್  ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದೆ. ಆ ಕ್ರಮಗಳು ಪರಿಸ್ಥಿತಿ ನಿಭಾಯಿಸಲು ಸಾಕಾಗಲಾರವು ಎಂದು ಅನಿಸಿದರೆ ಇನ್ನಷ್ಟು  ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಮಲ್ಲೋಹಳ್ಳಿ ಗ್ರಾಮದಲ್ಲಿ ಕಾರ್ಪೊರೇಷನ್ ಬ್ಯಾಂಕ್ ಆರಂಭಿಸಿರುವ ‘ಕಾರ್ಪ್ ಗ್ರಾಮೀಣ ವಿಕಾಸ ಕೇಂದ್ರದ (ಶಾಖಾರಹಿತ ಬ್ಯಾಂಕ್) ಉದ್ಘಾಟನೆ ನೆರವೇರಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ಸಿಟಿಬ್ಯಾಂಕ್‌ನ ಗುಡಗಾಂವ್ ಶಾಖೆಯಲ್ಲಿನ ಅವ್ಯವಹಾರದ ಬಗ್ಗೆ ‘ಆರ್‌ಬಿಐ’ ಖಂಡಿತವಾಗಿಯೂ ತನಿಖೆ ನಡೆಸಲಿದೆ ಎಂದರು. ಇರಾನ್ ಕಚ್ಚಾ ತೈಲ ಬಿಕ್ಕಟ್ಟು: ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದಕ್ಕೆ ಪ್ರತಿಯಾಗಿ ಹಣ ಪಾವತಿ ಮಾಡುವ ವ್ಯವಸ್ಥೆಯಲ್ಲಿ ಸಮಸ್ಯೆ ಉದ್ಭವಿಸಿರುವುದಕ್ಕೆ ಪ್ರತಿಕ್ರಿಯಿಸಿದ ಚಕ್ರವರ್ತಿ ಅವರು, ‘ಇದು ಭಾರತ ಅಥವಾ ಇರಾನಿನ ಸಮಸ್ಯೆಯಲ್ಲ. ಅದೊಂದು ಅಂತರ್‌ರಾಷ್ಟ್ರೀಯ ಸಮಸ್ಯೆಯಾಗಿದೆ. ಆರ್ಥಿಕ ದಿಗ್ಬಂಧನ ಮತ್ತಿತರ ಸಮಸ್ಯೆಗಳು ಇದರಲ್ಲಿ ತಳಕು ಹಾಕಿಕೊಂಡಿವೆ. ನಾವು (ಆರ್‌ಬಿಐ) ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಿದ್ದೇವೆ. ಎರಡೂ ದೇಶಗಳ ಸರ್ಕಾರಗಳು ಮತ್ತು ಕೇಂದ್ರ ಬ್ಯಾಂಕ್‌ಗಳು ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಿವೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.