ADVERTISEMENT

2012: ಯುವ ನಾಯಕತ್ವ ಪರ್ವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕತೆಯು ಬಿಕ್ಕಟ್ಟು ಎದುರಿಸುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ,  ಯುವ ಜನತೆಯ ಕೈಗಳಿಗೆ ನಾಯಕತ್ವದ ಹೊಣೆ ಒಪ್ಪಿಸುವುದು ಹೆಚ್ಚು ಸೂಕ್ತ. ಯುವ ಶಕ್ತಿ ತಮ್ಮ  ಸಾಮರ್ಥ್ಯ ಸಾಬೀತು ಪಡಿಸಲು ಇದು ಸಕಾಲ ಎಂದು ಮಾನವ ಸಂಪನ್ಮೂಲ ಸಲಹಾ ಸಂಸ್ಥೆ `ಹೇಯ್ ಗ್ರೂಪ್ ಇಂಡಿಯಾ~ ಹೇಳಿದೆ.

ಸೈರಸ್ ಮಿಸ್ತ್ರಿ ಅವರಿಂದ  ರಿಷಾದ್  ಪ್ರೇಮ್‌ಜೀವರೆಗೆ ದೇಶೀಯ ಉದ್ಯಮ ರಂಗದಲ್ಲಿ ಸದ್ಯ ಯುವಕರೇ ಮುಂಚೂಣಿಯಲ್ಲಿ ಇದ್ದಾರೆ.

ಯುವಜನತೆಯ ದಣಿವರಿಯದ ಶಕ್ತಿ ಮತ್ತು ಸವಾಲುಗಳನ್ನು ಮೆಟ್ಟಿ  ನಿಲ್ಲುವ ಸಾಮರ್ಥ್ಯವು ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ ಎಂದು ಕಂಪೆನಿಯ ನಿರ್ದೇಶಕ ಮನಿಷ್ ಸಿನ್ಹಾ ಹೇಳಿದ್ದಾರೆ.

ಟಾಟಾ ಸಮೂಹ ಈಗಾಗಲೇ 43 ವರ್ಷದ ಸೈರಸ್ ಮಿಸ್ತ್ರಿ ಅವರನ್ನು ರತನ್ ಟಾಟಾ ಅವರ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದೆ. ಅಜೀಂ ಪ್ರೇಮ್‌ಜಿ ಅವರ ಮಗ ರಿಷಾದ್ ಪ್ರೇಮ್‌ಜಿ `ವಿಪ್ರೊ~ ಕಂಪೆನಿಯ ಮುಖ್ಯ   ಕಾರ್ಯತಂತ್ರ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.  ಕಿರ್ಲೋಸ್ಕರ್ ಸಮೂಹದ ಅಲೋಕ್ ಕಿರ್ಲೋಸ್ಕರ್ ಮತ್ತು ಸುನಿಲ್ ಮಿತ್ತಲ್ ಅವರ ಮಗ ಶ್ರವಿನ್ ಮಿತ್ತಲ್ ತಮ್ಮ ತಮ್ಮ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಕ್ಷ್ಮೀ ಮಿತ್ತಲ್ ಅವರ ಮಗ ಆದಿತ್ಯ ಮಿತ್ತಲ್ ಅರ್ಸೆಲ್‌ಮಿತ್ತಲ್‌ಉಕ್ಕು ಘಟಕದ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆತಿಥ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಒಬೆರಾಯ್ ಸಮೂಹದ ಉತ್ತರಾಧಿಕಾರಿಯಾಗಿ ಪಿ.ಆರ್.ಎಸ್ ಒಬೆರಾಯ್ ಅವರ ಮಗ ವಿಕ್ರಂಜಿತ್ ಸಿಂಗ್ ನೇಮಕಗೊಳ್ಳುವ ಸಾಧ್ಯತೆ ಇದೆ. ವೇದಾಂತ ಸಮೂಹದ ಮುಖ್ಯಸ್ಥ ಅನಿಲ್ ಅಗರ್‌ವಾಲ್ ಅವರ ಮಗಳು ಪ್ರಿಯಾ ಅಗರ್‌ವಾಲ್ (22), ಹೊಸದಾಗಿ ಸ್ವಾಧೀನಪಡಿಸಿಕೊಳ್ಳಲಿರುವ ಕಂಪೆನಿ  ಸೈರನ್ ಇಂಡಿಯಾದ ನಿರ್ದೇಶಕಿಯಾಗಿ ನೇಮಕಗೊಳ್ಳುವ ಸಾಧ್ಯತೆಇದೆ.

ರಿಯಲ್ ಎಸ್ಟೇಟ್ ರಂಗದ ದೈತ್ಯ ಕಂಪೆನಿ `ಡಿಎಲ್‌ಎಫ್~ನ  ಪ್ರಮುಖ ಹುದ್ದೆಗಳಿಗೆ ಯುವ ಜನರನ್ನೇ ನೇಮಿಸಲಾಗಿದೆ. ದೇಶದ ಶ್ರಮಿಕ ವಲಯದಲ್ಲಿ ಯುವ ಜನತೆಯ ಪಾಲು ಗರಿಷ್ಠ ಮಟ್ಟದಲ್ಲಿದೆ. 2012ರಲ್ಲಿ ಕಾರ್ಪೊರೇಟ್ ಕಂಪೆನಿಗಳು ತಮ್ಮ ನಾಯಕತ್ವವನ್ನು ಯುವ ಜನತೆಯ ಕೈಗಿಡುತ್ತಿವೆ ಎಂದೂ `ಹೇಯ್ ಗ್ರೂಪ್ ಇಂಡಿಯಾ~ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.