ನವದೆಹಲಿ : ‘ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರುವುದಕ್ಕೆ ರಾಜ್ಯ ಸರ್ಕಾರಗಳಲ್ಲಿ ಸದ್ಯಕ್ಕೆ ಒಲವು ಕಂಡು ಬರುತ್ತಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸದ್ಯಕ್ಕೆ ಜಿಎಸ್ಟಿ ವ್ಯಾಪ್ತಿಯಿಂದ ಕಚ್ಚಾ ತೈಲ, ವಿಮಾನ ಇಂಧನ, ನೈಸರ್ಗಿಕ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ಗಳನ್ನು ಹೊರಗೆ ಇಡಲಾಗಿದೆ. ಇದರಿಂದಾಗಿ ಈ ಎಲ್ಲ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರದ ಎಕ್ಸೈಸ್ ಸುಂಕ ಮತ್ತು ರಾಜ್ಯಗಳ ವ್ಯಾಟ್ ಅನ್ವಯವಾಗುತ್ತಿದೆ. ‘ಪೆಟ್ರೋಲಿಯಂ ಉತ್ಪನ್ನಗ
ಳನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದಕ್ಕೆ ಬಹುತೇಕ ರಾಜ್ಯಗಳ ಆಕ್ಷೇಪ ಇದೆ. ಮುಂದೊಂದು ದಿನ ರಿಯಲ್ ಎಸ್ಟೇಟ್, ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಸ ತೆರಿಗೆ ವ್ಯವಸ್ಥೆ ವ್ಯಾಪ್ತಿಗೆ ತರುವುದರ ಬಗ್ಗೆ ತಮಗೆ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.
ವಿತ್ತೀಯ ಕೊರತೆ ನಿಯಂತ್ರಣ ಕಷ್ಟವಲ್ಲ: ‘ಏಪ್ರಿಲ್ನಿಂದ ಆರಂಭವಾಗಲಿರುವ ಹೊಸ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ನಿಯಂತ್ರಣ ಕಷ್ಟವಾಗಲಾ
ರದು’ ಎಂದೂ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ ಮುಂಬರುವ ಆರ್ಥಿಕ ವರ್ಷದಲ್ಲಿ ತೆರಿಗೆ ಮತ್ತು ತೆರಿಗೆಯೇತರ ಆದಾಯ ಹೆಚ್ಚಲಿದೆ. ಇದರಿಂದಾಗಿ ವಿತ್ತೀಯ ಕೊರತೆ ನಿಯಂತ್ರಣ ಕಷ್ಟವಾಗಲಾರದು’ ಎಂದರು.
‘ಹೊಸದಾಗಿ ಜಾರಿಗೆ ತಂದಿರುವ ಜಿಎಸ್ಟಿ ವ್ಯವಸ್ಥೆಯಿಂದ ತೆರಿಗೆ ಪಾವತಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಇದರಿಂದ ಜಿಎಸ್ಟಿ ಜಾರಿಗೆ ಬಂದ 12 ತಿಂಗಳಲ್ಲಿ ತೆರಿಗೆ ವರಮಾನ ಖಂಡಿತವಾಗಿಯೂ ಹೆಚ್ಚಲಿದೆ. ಹೀಗಾಗಿ ಮುಂದಿನ ವರ್ಷ ವಿತ್ತೀಯ ಕೊರತೆಯನ್ನು ಹೆಚ್ಚು ಸುಲಭವಾಗಿ ಭರ್ತಿ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಆರ್ಥಿಕ ಕೊರತೆಯನ್ನೂ ಸರಿದೂಗಿಸಬಹುದಾಗಿದೆ’ ಎಂದೂ ಜೇಟ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.