ನವದೆಹಲಿ: ಬಜೆಟ್ 2020ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ಗಳಲ್ಲಿ ಇರುವ ಠೇವಣಿ ವಿಮೆಯ ಮೊತ್ತವನ್ನು ₹ 1 ಲಕ್ಷದಿಂದ ₹ 5ಲಕ್ಷಕ್ಕೆ ಹೆಚ್ಚಿಸಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಅಂಗವಾಗಿರುವ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವು (ಡಿಐಸಿಜಿಸಿ) ಎಲ್ಲಾ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿನ ನಮ್ಮ ಠೇವಣಿಗಳಿಗೆ, ವಿಮೆ ರಕ್ಷಣೆ ಒದಗಿಸುತ್ತದೆ.
ಈ ನಿಗಮದ ವ್ಯಾಪ್ತಿಯಲ್ಲಿ ಎಲ್ಲ ವಾಣಿಜ್ಯ ಬ್ಯಾಂಕ್ಗಳು, ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಬ್ಯಾಂಕ್ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಬರುತ್ತವೆ. ‘ಡಿಐಸಿಜಿಸಿ’ಯ ಸೆಕ್ಷನ್ 2 (ಜಿಜಿ) ಅಡಿ ಬರುವ ಅರ್ಹ ಸಹಕಾರಿ ಬ್ಯಾಂಕ್ಗಳೂ ಇದರ ವ್ಯಾಪ್ತಿಗೆ ಬರುತ್ತವೆ.
ನಷ್ಟದ ಸುಳಿಗೆ ಸಿಲುಕಿ ಬಾಗಿಲು ಹಾಕಿದ, ದಿವಾಳಿ ಎದ್ದ, ಲೈಸೆನ್ಸ್ ರದ್ದಾದ ಬ್ಯಾಂಕ್ಗಳಲ್ಲಿ ವ್ಯಕ್ತಿಗಳು ಇರಿಸಿದ ಠೇವಣಿ ಮೊತ್ತವು ₹ 1 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೂ ಇಲ್ಲಿಯವರೆಗೆ ₹ 1 ಲಕ್ಷದವರೆಗೆ ಮಾತ್ರ ವಿಮೆ ದೊರೆಯುತ್ತಿತ್ತು. ಇನ್ನು ಮುಂದೆ ಇದು ₹ 5 ಲಕ್ಷದವರೆಗೆ ದೊರೆಯಲಿದೆ ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ.
ಅನೇಕ ಬ್ಯಾಂಕ್ಗಳು ಇತ್ತೀಚೆಗೆ ವಂಚನೆ, ಹಗರಣಗಳಿಗೆ ಗುರಿಯಾಗಿ ಸುದ್ದಿಯಾಗುತ್ತಿವೆ. ಇದರಿಂದ ಠೇವಣಿದಾರರಲ್ಲಿ ತಮ್ಮ ಉಳಿತಾಯದ ಹಣದ ಬಗ್ಗೆ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಇದು ಹೆಚ್ಚು ಮಹತ್ವದ್ದಾಗಿದೆ.
2019–20ರ ಹಣಕಾಸು ವರ್ಷದ ಮೊದಲ 6 ತಿಂಗಳಲ್ಲಿ ಸರ್ಕಾರಿ ಬ್ಯಾಂಕ್ಗಳಲ್ಲಿ ನಡೆದಿರುವ ವಂಚನೆ ಮೊತ್ತ ₹ 95,700 ಕೋಟಿಯಾಗಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬರೋಬ್ಬರಿ 5,743 ವಂಚನೆ ಪ್ರಕರಣಗಳು ಬಯಲಿಗೆ ಬಂದಿವೆ.
ಯಾವೆಲ್ಲ ಠೇವಣಿ ಇದಕ್ಕೆ ಒಳಗೊಂಡಿದೆ
ಉಳಿತಾಯ, ಸ್ಥಿರ, ಚಾಲ್ತಿ, ಆರ್ಡಿ ಇತ್ಯಾದಿ ಠೇವಣಿ ಖಾತೆಯಲ್ಲಿನ ಮೊತ್ತಕ್ಕೆ ವಿಮೆ ಸೌಲಭ್ಯ ಸಿಗಲಿದೆ.
ವಿದೇಶಿ ಸರ್ಕಾರಗಳ ಠೇವಣಿ, ಕೇಂದ್ರ/ರಾಜ್ಯ ಸರ್ಕಾರಗಳ ಠೇವಣಿ, ಅಂತರ ಬ್ಯಾಂಕ್ ಠೇವಣಿ, ರಾಜ್ಯ ಸಹಕಾರಿ ಬ್ಯಾಂಕಿನಲ್ಲಿನ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕುಗಳ ಠೇವಣಿಗೆ ವಿಮೆ ಸೌಲಭ್ಯ ಸಿಗುವುದಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.