ADVERTISEMENT

ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ: ಕೇಂದ್ರ ಬಜೆಟ್‌ಗೆ ಸಿಎಂ ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 14:38 IST
Last Updated 1 ಫೆಬ್ರುವರಿ 2026, 14:38 IST
<div class="paragraphs"><p>ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಕೊಟ್ಟಿದೆ ಎಂದು ಕೈಸನ್ನೆ ಮಾಡಿ ಟೀಕಿಸಿದರು. ಸಚಿವ ಶಿವರಾಜ ತಂಗಡಗಿ ಇದ್ದಾರೆ</p></div>

ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಕೊಟ್ಟಿದೆ ಎಂದು ಕೈಸನ್ನೆ ಮಾಡಿ ಟೀಕಿಸಿದರು. ಸಚಿವ ಶಿವರಾಜ ತಂಗಡಗಿ ಇದ್ದಾರೆ

   

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್

ಕಲಬುರಗಿ: ‘ಇದು ದೂರದೃಷ್ಟಿ ಇಲ್ಲದ, ನಿರಾಶಾದಾಯಕ ಬಜೆಟ್.‌ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ರಾಜ್ಯಕ್ಕೆ ಬರೀ ಚೊಂಬು ಕೊಟ್ಟಿದೆ. ಕೇವಲ ಕರ್ನಾಟಕವಲ್ಲ, ಇಡೀ‌ ದಕ್ಷಿಣ ಭಾರತಕ್ಕೇ ಏನೂ ಕೊಟ್ಟಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ADVERTISEMENT

‘ಇಡೀ ಬಜೆಟ್‌ ತುಂಬ ವಿಕಸಿತ‌ ಭಾರತದ ಬಗೆಗೆ ಪ್ರಸ್ತಾಪವಿದೆ. ಅದು ಬರೀ‌ ಮಾತಿನಲ್ಲಿದೆ. ಅದನ್ನು ಕೃತಿಗೆ ಇಳಿಸುವ‌ ಯಾವುದೇ ಯೋಜನೆಗಳಿಲ್ಲ’ ಎಂದು ಕಲಬುರಗಿ ‌ವಿಮಾನ‌ ನಿಲ್ದಾಣದಲ್ಲಿ‌ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದರು.

‘ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳಾಗಿ ಘೋಷಿಸುವಂತೆ ನಾವು ಕೇಳಿದ್ದೆವು.‌ ಅದರ, ಬಗೆಗೆ ಒಂದೂ ಪದವಿಲ್ಲ. 2023–24ರಲ್ಲಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್, ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಘೋಷಿಸಿದ್ದರು. ಈತನಕ ಒಂದೂ ರೂಪಾಯಿ ಕೊಟ್ಟಿಲ್ಲ’ ಎಂದರು.

‘ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರವು ಅನ್ಯಾಯ ಮುಂದುವರಿಸಿದೆ. ನಾವು ಕನಿಷ್ಠ 14ನೇ ಹಣಕಾಸು ಆಯೋಗದಲ್ಲಿ ನಿಗದಿಯಾಗಿದ್ದ ಶೇ 4.71ರಷ್ಟಾದರೂ ಕೊಡಿ ಎಂದು 16ನೇ ಹಣಕಾಸು ಆಯೋಗದ ಎದುರು ವಾದ ಮಂಡಿಸಿದ್ದೆವು. ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲಿಗಾಗಿ ಪ್ರಧಾನಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಆದರೂ, ತೆರಿಗೆಯಲ್ಲಿ ಬರೀ ಶೇ 4.13ರಷ್ಟು ಪಾಲು ಕೊಡಲಾಗಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಿಗೆ ರಾಜ್ಯಕ್ಕೆ ಕೇವಲ ತಲಾ ₹ 18 ಸಾವಿರ ಕೋಟಿಗಳಷ್ಟು ಹಂಚಿಕೆ ಮಾಡಿದೆ. ಜಿಎಸ್‌ಟಿಯಲ್ಲಿ ರಾಜ್ಯವು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಕರ್ನಾಟಕದಿಂದ ವರ್ಷಕ್ಕೆ ₹ 4.50 ಲಕ್ಷ ಕೋಟಿಗಳಷ್ಟು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯ ಒಂದು ರೂಪಾಯಿ ತೆರಿಗೆ ಕಟ್ಟಿದರೆ ಬರೀ 14 ಪೈಸೆ ತೆರಿಗೆ ರೂಪದಲ್ಲಿ ಕೊಡುತ್ತಿದೆ. ಇದು ಅನ್ಯಾಯವಲ್ಲವೇ’ ಎಂದು ಪ್ರಶ್ನಿಸಿದರು.

‘ಬೆಂಗಳೂರು–ಮುಂಬೈ, ಬೆಂಗಳೂರು–ಪುಣೆ, ಬೆಂಗಳೂರು–ಮಂಗಳೂರು ಹೈಸ್ಪೀಡ್‌ ರೈಲು ಕೇಳಿದ್ದವು. ಕಲ್ಯಾಣ ಕರ್ನಾಟಕಕ್ಕೆ 371 (ಜೆ) ಅಡಿ ₹ 5 ಸಾವಿರ ಕೋಟಿ ಮ್ಯಾಚಿಂಗ್‌ ಗ್ರ್ಯಾಂಟ್, ರಾಯಚೂರಿಗೆ ಏಮ್ಸ್‌, ಕಬ್ಬು, ತೊಗರಿ, ಬೇಳೆಕಾಳುಗಳಿಗೆ ಆರ್ಥಿಕ ನೆರವು ಕೇಳಿದ್ದೆವು. ಅದಕ್ಕೂ ಏನೂ ಕೊಟ್ಟಿಲ್ಲ. ಕೃಷ್ಣಾ ನದಿ ನೀರು ಹಂಚಿಕೆ ಬಗೆಗೆ ಗ್ಯಾಜೆಟ್‌ ಅಧಿಸೂಚನೆ ಹೊರಡಿಸಿಲ್ಲ. ಮೇಕೆದಾಟು ಯೋಜನೆಗೆ ಅನುಮತಿ ಕೊಟ್ಟಿಲ್ಲ. ಮಹದಾಯಿ ಯೋಜನೆಗೆ ಪರಿಸರ ಸಚಿವಾಲಯದ ಅನುಮತಿ ಕೊಟ್ಟಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.