ADVERTISEMENT

ಉದ್ಯೋಗ ಸೃಷ್ಟಿಗೆ ಆದ್ಯತೆ, ಇದು ದೂರದೃಷ್ಠಿಯ ಬಜೆಟ್ ಎಂದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 13:43 IST
Last Updated 1 ಫೆಬ್ರುವರಿ 2020, 13:43 IST
 ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಬಜೆಟ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು, ಇದು ದೂರದೃಷ್ಠಿಯ ಬಜೆಟ್‌ ಎಂದು ಕರೆದಿದ್ದಾರೆ.

ದೂರದೃಷ್ಠಿಹೊಂದಿರುವ ದಶಕದ ಮೊದಲ ಬಜೆಟ್‌ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಮತ್ತು ಅವರ ತಂಡವನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಸುಧಾರಣೆಗಳು ಆರ್ಥಿಕತೆಯ ವೇಗ ಹೆಚ್ಚಿಸುತ್ತವೆ. ಜೊತೆಗೆ, ದೇಶದ ನಾಗರಿಕರನ್ನು ಆರ್ಥಿಕವಾಗಿ ಸಬಲಗೊಳಿಸುತ್ತವೆ. ಈ ವರ್ಷದ ಬಜೆಟ್‌ ಕೃಷಿ, ಮೂಲಸೌಕರ್ಯ, ಜವಳಿ ಮತ್ತು ತಂತ್ರಜ್ಞಾನದ ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿದ್ದು, ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಾಂಪ್ರದಾಯಿಕ ಮತ್ತು ಹೊಸ ವಿಧಾನಗಳಿಗೆ ಒತ್ತು ನೀಡುವಮೂಲಕ ಕೃಷಿ ಕ್ಷೇತ್ರಕ್ಕೆ ಸೀತಾರಾಮನ್‌ಹೆಚ್ಚು ಆದ್ಯತೆ ನೀಡಿದ್ದಾರೆ ಎಂದು ಶ್ಲಾಘಿಸಿದರು. ಜತೆಗೆ,ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಯುವಕರಿಗೆ ಹೆಚ್ಚುಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಹೇಳಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಕೈಗೊಂಡಿರುವ ಉಪಕ್ರಮಗಳು ಭಾರತಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ (ಡಿವಿಡೆಂಡ್‌) ಲಾಭಾಂಶದ ಮೇಲೆ ಶೇ 15ರಷ್ಟು ತೆರಿಗೆ ಮತ್ತು ಸರ್‌ಚಾರ್ಜ್‌ ಇತ್ತು. ಇದನ್ನು ತಗ್ಗಿಸಬೇಕು ಅಥವಾ ತೆರಿಗೆದಾರರಿಗೆ ಅವರ ಆದಾಯ ಜೊತೆಗೆ ಲೆಕ್ಕ ಹಾಕಿ ತೆರಿಗೆ ಪಾವತಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇತ್ತು. ಆ ನಿಟ್ಟಿನಲ್ಲಿ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) ರದ್ದುಪಡಿಸಲಾಗಿದೆ.ಇದರಿಂದ ಸ್ಟಾರ್ಟ್ ಅಪ್‌ ಮತ್ತು ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗಲಿದೆ.ಈ ಬಜೆಟ್‌ ಆಡಳಿತದ ಬದ್ಧತೆ ಹೆಚ್ಚಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.