ADVERTISEMENT

ರಾಜ್ಯ ಬಜೆಟ್‌: ಭರಪೂರ ನಿರೀಕ್ಷೆ

ಜಿಲ್ಲೆಯ ಜನರಲ್ಲಿ ಹೆಚ್ಚಿದ ಕುತೂಹಲ

ಜೆ.ಆರ್.ಗಿರೀಶ್
Published 4 ಮಾರ್ಚ್ 2020, 7:20 IST
Last Updated 4 ಮಾರ್ಚ್ 2020, 7:20 IST
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ.
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ.   

ಕೋಲಾರ: ರಾಜ್ಯ ಸರ್ಕಾರದ ಬಜೆಟ್‌ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲೆಯ ಜನ 2020–21ನೇ ಹಣಕಾಸು ವರ್ಷದ ಆಯವ್ಯಯದ ಮೇಲೆ ಭರಪೂರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಾರ್ಚ್‌ 5ರಂದು ಬಜೆಟ್‌ ಮಂಡಿಸಲಿದ್ದು, ಬಜೆಟ್‌ನಲ್ಲಿ ಜಿಲ್ಲೆಗೆ ಯಾವ ಬಂಪರ್‌ ಯೋಜನೆ ಪ್ರಕಟಿಸಲಿದ್ದಾರೆ ಮತ್ತು ನೀರಾವರಿ ಯೋಜನೆಗಳಿಗೆ ಎಷ್ಟು ಅನುದಾನ ನೀಡಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.

ಹಾಲಿನ ಪ್ರೋತ್ಸಾಹಧನ ಹೆಚ್ಚಳ, ಅಂತರ್ಜಲ ವೃದ್ಧಿಗೆ ಕ್ರಮ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿಕೆಯಂತಹ ಮಹತ್ವದ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಬಹುದೆಂದು ಜಿಲ್ಲೆಯ ಅನ್ನದಾತರು ಬಲವಾಗಿ ನಂಬಿದ್ದಾರೆ.

ADVERTISEMENT

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಯಾದ ಕೆ.ಸಿ ವ್ಯಾಲಿ ಯೋಜನೆಯ 2ನೇ ಹಂತದ ಕಾಮಗಾರಿ ಆರಂಭಿಸಬೇಕು ಎಂಬುದು ಜಿಲ್ಲೆಯ ಜನರ ಬಹು ಮುಖ್ಯ ಬೇಡಿಕೆಯಾಗಿದೆ. ಈಗಾಗಲೇ ಯೋಜನೆ ಪೂರ್ಣಗೊಂಡು ಕೋಲಾರ ಹಾಗೂ ಮಾಲೂರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿದಿದೆ. ಉಳಿದ ತಾಲ್ಲೂಕುಗಳ ಕೆರೆಗಳಿಗೂ 2ನೇ ಹಂತದಲ್ಲಿ ನೀರು ಹರಿಸಲು ಉದ್ದೇಶಿಸಲಾಗಿದ್ದು, ಕಾಮಗಾರಿಗೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮಂಜೂರಾಗುವ ನಿರೀಕ್ಷೆಯಿದೆ.

ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿದ್ದ ₹ 252 ಕೋಟಿ ಅಂದಾಜು ವೆಚ್ಚದ ಯರಗೋಳ್‌ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪುನರಾರಂಭವಾಗಿದೆ. 2006ರಲ್ಲಿ ಆರಂಭವಾದ ಯೋಜನೆ ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೈಪ್‌ಲೈನ್‌ ಸೇರಿದಂತೆ ಯೋಜನೆಯ ಬಾಕಿ ಕಾಮಗಾರಿಗೆ ಆಯವ್ಯಯದಲ್ಲಿ ಅನುದಾನ ನೀಡಬೇಕಿದೆ. ಯರಗೋಳ್‌ ಯೋಜನೆ ಪೂರ್ಣಗೊಂಡರೆ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ.

ಪ್ರೋತ್ಸಾಹಧನ: ಹೈನುಗಾರಿಕೆಯೇ ಜೀವನಾಡಿಯಾಗಿರುವ ಜಿಲ್ಲೆಯಲ್ಲಿ ರೈತರು ಹಾಲಿನ ಪ್ರೋತ್ಸಾಹಧನ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬರಪೀಡಿತ ಜಿಲ್ಲೆಯಲ್ಲಿ ಕೃಷಿ ನಿರ್ವಹಣೆ ಕಷ್ಟವಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, 2 ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟ.

ಹೀಗಾಗಿ ರೈತರು ಕೃಷಿ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದು, ಹೈನುಗಾರಿಕೆಯು ರೈತ ಕುಟುಂಬಗಳ ಬೆನ್ನೆಲುಬಾಗಿದೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದ್ದು, ಹೈನೋದ್ಯಮಕ್ಕೆ ಶಕ್ತಿ ತುಂಬಲು ಹಾಲಿನ ಪ್ರೋತ್ಸಾಹಧನ ಹೆಚ್ಚಿಸಬೇಕೆಂಬ ಕೂಗು ಬಲವಾಗಿದೆ.

ಸರ್ಕಾರವು ಸದ್ಯ ಪ್ರತಿ ಲೀಟರ್‌ ಹಾಲಿಗೆ ₹ 5 ಪ್ರೋತ್ಸಾಹಧನ ನೀಡುತ್ತಿದೆ. ಹಲವು ವರ್ಷಗಳಿಂದ ಪ್ರೋತ್ಸಾಹಧನ ಪರಿಷ್ಕರಿಸಿಲ್ಲ. ಹಿಂದಿನ ಹಣಕಾಸು ವರ್ಷದಲ್ಲಿ ಪ್ರೋತ್ಸಾಹಧನವನ್ನು ₹ 6ಕ್ಕೆ ಹೆಚ್ಚಿಸಿದರೂ ಜಾರಿಯಾಗಲಿಲ್ಲ. ಲೀಟರ್‌ಗೆ ₹ 2 ಪ್ರೋತ್ಸಾಹಧನ ಹೆಚ್ಚಿಸಬೇಕೆಂದು ಹಾಲು ಒಕ್ಕೂಟವು ಸರ್ಕಾರಕ್ಕೆ ಮನವಿ ಮಾಡಿದೆ. ಸರ್ಕಾರ ಮನವಿಗೆ ಸ್ಪಂದಿಸಿ ಹಾಲಿನ ಪ್ರೋತ್ಸಾಹಧನ ಪರಿಷ್ಕರಿಸಬೇಕು ಎಂಬುದು ಹಾಲು ಉತ್ಪಾದಕರ ಹಕ್ಕೊತ್ತಾಯವಾಗಿದೆ.

ಮಾರುಕಟ್ಟೆ ಸ್ಥಳಾಂತರ: ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಟೊಮೆಟೊ ಬೆಳೆಗಾರರಿಗೆ ಸುಸ್ಥಿರ ಮಾರುಕಟ್ಟೆ ಹಾಗೂ ಉತ್ತಮ ದರ ಒದಗಿಸಬೇಕಿದೆ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು ₹ 200 ಕೋಟಿ ಟೊಮೆಟೊ ವಹಿವಾಟು ನಡೆಯುತ್ತದೆ. ಬೆಲೆ ಕುಸಿತ, ಕೀಟಬಾಧೆಯಿಂದ ತತ್ತರಿಸಿರುವ ಟೊಮೆಟೊ ಬೆಳೆಗಾರರ ಸಂಕಷ್ಟಕ್ಕೆ ಬಜೆಟ್‌ನಲ್ಲಿ ಪರಿಹಾರದ ಭರವಸೆ ಸಿಗುವ ನಿರೀಕ್ಷೆಯಿದೆ.

ಖಾಸಗಿ ಕಂಪನಿ ಸಹಭಾಗಿತ್ವದೊಂದಿಗೆ ಜಿಲ್ಲೆಯಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪಿಸಲು ಹಿಂದಿನ ಬಜೆಟ್‌ನಲ್ಲಿ ₹ 50 ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ, ಈ ಘೋಷಣೆ ಕಡತಕ್ಕಷ್ಟೇ ಸೀಮಿತವಾಯಿತು. ಜಿಲ್ಲಾ ಕೇಂದ್ರದಲ್ಲಿ ಟೊಮೆಟೊ ವಹಿವಾಟಿಗೆ ಪ್ರತ್ಯೇಕ ಮಾರುಕಟ್ಟೆ ಆರಂಭಿಸಬೇಕೆಂದು ಒತ್ತಾಯಿಸಲಾಗಿದೆ. ಹಾಲಿ ಎಪಿಎಂಸಿಯಲ್ಲಿ ಜಾಗದ ಕೊರತೆಯಿಂದಾಗಿ ಟೊಮೆಟೊ ವಹಿವಾಟಿಗೆ ಸಮಸ್ಯೆಯಾಗಿದೆ. ಹೀಗಾಗಿ ಟೊಮೆಟೊ ಮಾರುಕಟ್ಟೆ ಸ್ಥಳಾಂತರಿಸಲು ಹಣಕಾಸು ನೆರವಿನ ಜತೆಗೆ ಜಾಗ ಮಂಜೂರಾಗಬೇಕಿದೆ.

ಸಂಸ್ಕರಣಾ ಘಟಕ: ಹಣ್ಣುಗಳ ರಾಜ ಎಂದೇ ಹೆಸರಾದ ಮಾವಿನ ಹಣ್ಣಿನ ಉತ್ಪಾದನೆಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂಬುದು ಬಹು ವರ್ಷಗಳ ಬೇಡಿಕೆಯಾಗಿದೆ. ಜಿಲ್ಲೆಯಲ್ಲಿ ಸುಮಾರು 51,632 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಿದೆ. 70 ಸಾವಿರ ಮಂದಿ ಬೆಳೆಗಾರರು ಮಾವು ಬೆಳೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಜಿಲ್ಲೆಯ ಮಾವು ರಫ್ತಾಗುತ್ತದೆ. ಮಾವು ಸಂರಕ್ಷಣೆಗೆ ಶಿಥಲೀಕರಣ ಘಟಕ ಮತ್ತು ಅದರ ಉಪ ಉತ್ಪನ್ನಗಳ ಸಂಸ್ಕರಣಾ ಘಟಕ ಆರಂಭಕ್ಕೆ ಬಜೆಟ್‌ನಲ್ಲಿ ಒತ್ತು ಸಿಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.