ADVERTISEMENT

ನಿರ್ಮಲಾ ಜತೆಗಿನ ವರ್ಚುವಲ್ ಸಭೆ ಬಹಿಷ್ಕಾರ ನಿರ್ಧಾರ

ಪಿಟಿಐ
Published 27 ನವೆಂಬರ್ 2022, 2:31 IST
Last Updated 27 ನವೆಂಬರ್ 2022, 2:31 IST

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ನವೆಂಬರ್‌ 28ರಂದು ನಡೆಯಲಿರುವ ಬಜೆಟ್ ಪೂರ್ವ ವರ್ಚುವಲ್‌ ಸಭೆಯನ್ನು ಬಹಿಷ್ಕರಿಸಲು 10 ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯು ನಿರ್ಧರಿಸಿದೆ.

ಮುಖಾಮುಖಿಯಾಗಿ ಭೇಟಿ ಮಾಡಿ ಮಾತನಾಡಲು ಸಮಯ ನೀಡುವಂತೆ ಬೇಡಿಕೆ ಇಟ್ಟಿದೆ.

ನವೆಂಬರ್‌ 25ರಂದು ಸಚಿವಾಲಯವು ಕಳುಹಿಸಿರುವ ಇ–ಮೇಲ್‌ನ ಪ್ರಕಾರ, ಪ್ರತಿ ಸಂಘಟನೆಗೆ ತಲಾ ಮೂರು ನಿಮಿಷಗಳ ಕಾಲಾವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕೆ ವೇದಿಕೆಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ನವೆಂಬರ್‌ 28ರಂದು ನಡೆಸಲು ಉದ್ದೇಶಿಸಿರುವ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸುವುದಿಲ್ಲ’ ಎಂದು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಅದು ತಿಳಿಸಿದೆ.

ADVERTISEMENT

ಸಭೆಯ ಕುರಿತು ಹಣಕಾಸು ಸಚಿವಾಲಯವು ಶುಕ್ರವಾರ ಸಂಘಟನೆಗಳಿಗೆ ಪತ್ರದ ಮೂಲಕ ತಿಳಿಸಿತ್ತು. ಕೋವಿಡ್‌ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಹೀಗಿರುವಾಗ 12ಕ್ಕೂ ಅಧಿಕ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಕೇವಲ 75 ನಿಮಿಷಗಳು ಸಮಯಾವಕಾಶ ನೀಡಲಾಗಿದೆ. ಇದರಿಂದಾಗಿ, ಒಂದು ಸಂಘಟನೆಗೆ ಐದು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯ ಸಿಗಲಿದೆ ಎಂದು ವೇದಿಕೆಯು ತೀವ್ರ ನಿರಾಸೆ ವ್ಯಕ್ತಪಡಿಸಿತ್ತು. ಪ್ರತಿ ಸಂಘಟನೆಗೆ ಸಲಹೆಗಳನ್ನು ನೀಡಲು ತಲಾ ಮೂರು ನಿಮಿಷ ನೀಡುವುದಾಗಿ ಮತ್ತೊಂದು ಪತ್ರವನ್ನು ಸಚಿವಾಲಯವು ಕಳುಹಿಸಿದೆ. ಆ ಬಳಿಕ ವಿಡಿಯೊ ಕಾನ್ಫರೆನ್ಸ್‌ ಅನ್ನು ಬಹಿಷ್ಕರಿಸುವುದಾಗಿ ವೇದಿಕೆಯು ಸಚಿವಾಲಯಕ್ಕೆ ಪತ್ರ ಬರೆದಿದೆ.

ಐಎನ್‌ಟಿಯುಸಿ, ಎಐಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯುಎ, ಸಿಐಟಿಯು, ಎಐಸಿಸಿಟಿಯು, ಎಲ್‌ಪಿಎಫ್‌, ಎಐಯುಟಿಯುಸಿ ಮತ್ತು ಯುಟಿಯುಸಿ ಸೇರಿಕೊಂಡು ವೇದಿಕೆ ರಚಿಸಿಕೊಂಡಿವೆ. ಭಾರತೀಯ ಮಜ್ದೂರ್‌ ಸಂಘವು (ಬಿಎಂಎಸ್‌) ಈ ವೇದಿಕೆಯ ಭಾಗವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.