ADVERTISEMENT

ಸುಲಲಿತ ವಹಿವಾಟು; ಬೆಂಗಳೂರು ಪರಿಗಣನೆ

ಸಮಗ್ರ ಚಿತ್ರಣಕ್ಕೆ ವಿಶ್ವಬ್ಯಾಂಕ್‌ ನಿರ್ಧಾರ

ಪಿಟಿಐ
Published 23 ಅಕ್ಟೋಬರ್ 2019, 15:03 IST
Last Updated 23 ಅಕ್ಟೋಬರ್ 2019, 15:03 IST
ಉದ್ಯಮಿ
ಉದ್ಯಮಿ   

ನವದೆಹಲಿ: ಸುಲಭವಾಗಿ ಉದ್ದಿಮೆ ವಹಿವಾಟು ಆರಂಭಿಸಲು ಇರುವ ಸೌಲಭ್ಯಗಳ ಕುರಿತ ವರದಿ ಸಿದ್ಧಪಡಿಸಲು ವಿಶ್ವಬ್ಯಾಂಕ್‌ ಇನ್ನು ಮುಂದೆ ಬೆಂಗಳೂರು ನಗರವನ್ನೂ ಪರಿಗಣಿಸಲಿದೆ.

ದೇಶದಲ್ಲಿನ ಸುಲಲಿತ ವಹಿವಾಟಿನ ಕುರಿತ ಸಮಗ್ರ ಚಿತ್ರಣ ಒದಗಿಸಲು ಕೋಲ್ಕತ್ತ ಮತ್ತು ಬೆಂಗಳೂರು ನಗರಗಳನ್ನೂ ಪರಿಗಣಿಸಲಾಗುವುದು. ಸದ್ಯಕ್ಕೆ ದೆಹಲಿ ಮತ್ತು ಮುಂಬೈ ನಗರಗಳನ್ನಷ್ಟೇ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಭಾರತದ ವಿಶಾಲ ಭೂ ಪ್ರದೇಶಕ್ಕೆ ಕೇವಲ ಎರಡು ನಗರಗಳ ಪ್ರಾತಿನಿಧ್ಯ ಸರಿಯಾಗಿರುವುದಿಲ್ಲ. ಈಗ ಹೊಸದಾಗಿ ಎರಡು ನಗರಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದರಿಂದ ವಿಶ್ವಬ್ಯಾಂಕ್‌ನ ವರದಿಯು ಹೆಚ್ಚು ಸಮರ್ಪಕವಾದ ಚಿತ್ರಣ ನೀಡಲಿದೆ. ಈ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಪ್ರಕಟವಾಗುವ ವರದಿಗಳಲ್ಲಿ ಈ ನಗರಗಳಲ್ಲಿನ ಸೌಲಭ್ಯಗಳನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

10 ಮಾನದಂಡ: ವರದಿಯು 10 ಮಾನದಂಡಗಳನ್ನು ಆಧರಿಸಿ 190 ದೇಶಗಳ ಶ್ರೇಯಾಂಕ ನಿರ್ಧರಿಸಲಿದೆ. ಹೊಸ ಉದ್ದಿಮೆ – ವಹಿವಾಟನ್ನು ಸುಲಭವಾಗಿ ಆರಂಭಿಸುವುದು, ನಿರ್ಮಾಣ ಅನುಮತಿ, ವಿದ್ಯುತ್‌ ಸಂಪರ್ಕ, ಸಾಲ ಪಡೆಯುವುದು, ತೆರಿಗೆ ಪಾವತಿ, ಸಾಗರೋತ್ತರ ವ್ಯಾಪಾರ, ಗುತ್ತಿಗೆ ಜಾರಿ ಮತ್ತು ಹಣಕಾಸು ನಷ್ಟ ಪರಿಹರಿಸಿಕೊಳ್ಳುವುದು ಈ ಮಾನದಂಡಗಳಲ್ಲಿ ಸೇರಿವೆ.

ವಿಶ್ವಬ್ಯಾಂಕ್‌ನ ಸುಲಲಿತ ವಹಿವಾಟಿನ 2020ರ ವರದಿ ಗುರುವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಸದ್ಯಕ್ಕೆ 77ನೆ ಸ್ಥಾನದಲ್ಲಿ ಇರುವ ಭಾರತದ ಸ್ಥಾನಮಾನ ಸುಧಾರಣೆ ಕಾಣುವ ಸಾಧ್ಯತೆ ಇದೆ.

ಸುಲಭವಾಗಿ ಉದ್ದಿಮೆ ಆರಂಭಿಸುವ ಮತ್ತು ವಹಿವಾಟು ನಡೆಸುವುದಕ್ಕೆ ಸಂಬಂಧಿಸಿದ 10 ಮಾನದಂಡಗಳ ಪೈಕಿ 6 ವಿಷಯಗಳಲ್ಲಿ ಭಾರತದ ಶ್ರೇಯಾಂಕವು 2019ರ ವರದಿಯಲ್ಲಿ ಸುಧಾರಣೆ ಕಂಡಿತ್ತು. ಸತತ ಎರಡನೇ ವರ್ಷವೂ ಉತ್ತಮ ಸಾಧನೆ ತೋರಿ, ಶ್ರೇಯಾಂಕ ಪಟ್ಟಿಯಲ್ಲಿ ಬಡ್ತಿ ಪಡೆದಿತ್ತು.

ವರ್ಷ;ಶ್ರೇಯಾಂಕ

2019;77

2018;100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.