ನವದೆಹಲಿ: ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿಲ್ಲಎಂದು ಬಿಎಸ್ಎನ್ಎಲ್ ಉದ್ಯೋಗಿಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಖಾಸಗಿ ದೂರಸಂಪರ್ಕ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸರ್ಕಾರ ಸಮಸ್ಯೆಗಳನ್ನು ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ ಎಂದೂ ದೂರಿವೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಿಗಮದ ಉದ್ಯೋಗಿಗಳ ಮೂರು ದಿನಗಳ ಮುಷ್ಕರ ಸೋಮವಾರ ಆರಂಭವಾಗಿದೆ.
ಸಮಸ್ಯೆಗಳನ್ನು ಬಗೆಹರಿಸಲು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಭಾನುವಾರ ಭರವಸೆ ನೀಡಿತ್ತು. ಈ ಬೆನ್ನಲ್ಲೇ ಸಂಘಟನೆಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ.
‘ಸಿಬ್ಬಂದಿ ಜತೆ ಮಾತುಕತೆ ನಡೆಸುತ್ತಿರುವುದಾಗಿಸರ್ಕಾರ ಸುಳ್ಳು ಪ್ರಕಟಣೆ ನೀಡಿದೆ. ಶೇ 15ರಷ್ಟು ಫಿಟ್ಮೆಂಟ್ನೊಂದಿಗೆ ವೇತನ ಪರಿಷ್ಕರಣೆ ಮಾಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಆದರೆ, ನಿಗಮದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಶೇ 5ರಷ್ಟು ಫಿಟ್ಮೆಂಟ್ ನೀಡುವಂತೆ ದೂರಸಂಪರ್ಕ ಇಲಾಖೆಗೆ ತಿಳಿಸಿದ್ದೇವೆ. ಹೀಗಿದ್ದರೂ ಅದನ್ನು ಪರಿಗಣಿಸಿಲ್ಲ’ ಎಂದು ಭಾರತೀಯ ಸಂಚಾರ್ ನಿಗಮ್ ನಿಯಮಿತದ ಅಖಿಲ ಭಾರತ ಸಂಘಟನೆಗಳು ಮತ್ತು ಒಕ್ಕೂಟಗಳ (ಎಯುಎಬಿ) ಸಂಚಾಲಕ ಪಿ. ಅಭಿಮನ್ಯು ತಿಳಿಸಿದ್ದಾರೆ.
4ಜಿ ಸೇವೆಗಳಿಗೆ ತರಂಗಾಂತರ ಹಂಚಿಕೆ, ನಿಗಮದ ಭೂಮಿ ನಿರ್ವಹಣೆ ಯೋಜನೆಗೆ ಒಪ್ಪಿಗೆ, ವೇತನ ಪರಿಷ್ಕರಣೆ ಜಾರಿ ಮತ್ತು ಪಿಂಚಣಿ ಕೊಡುಗೆಯಲ್ಲಿ ಹೊಂದಾಣಿಕೆಗೆ ಆಗ್ರಹಿಸಿ ಉದ್ಯೋಗಿಗಳು ಬೀದಿಗಿಳಿದಿದ್ದಾರೆ.
‘ಬಿಎಸ್ಎನ್ಎಲ್ ಸಾಲ ₹ 13 ಸಾವಿರ ಕೋಟಿ ಇದೆ. ಆದರೆ, ವೊಡಾಫೋನ್–ಐಡಿಯಾದ ಸಾಲ ₹ 1.2 ಲಕ್ಷ ಕೋಟಿ, ಏರ್ಟೆಲ್ ಸಾಲ ₹ 1.06 ಲಕ್ಷ ಕೋಟಿ ಇದೆ. ಜಿಯೊದ ಸಾಲ ₹ 2 ಲಕ್ಷ ಕೋಟಿಗೆ ತಲುಪುವ ಅಂದಾಜು ಮಾಡಲಾಗಿದೆ. ಈ ಎಲ್ಲಾ ಖಾಸಗಿ ಸಂಸ್ಥೆಗಳು ಭಾರತದ ಬ್ಯಾಂಕ್ಗಳಿಂದಲೇ ಸಾಲ ಪಡೆದಿವೆ. ಆದರೆ, ಬಿಎಸ್ಎನ್ಎಲ್ಗೆ ಮಾತ್ರ ಸಾಲ ಪಡೆಯಲು ದೂರಸಂಪರ್ಕ ಇಲಾಖೆಯು ಅನುಮತಿ ನೀಡುತ್ತಿಲ್ಲ’ ಎಂದೂ ಅವರು ಅಸಮಾಧಾನ ಹೊರಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.