ADVERTISEMENT

ಕೇಂದ್ರ ಬಜೆಟ್‌ ಸಿದ್ಧತೆ ಪ್ರಕ್ರಿಯೆಗೆ ಚಾಲನೆ

ವಿತ್ತೀಯ ಶಿಸ್ತು, ಉದ್ಯೋಗ ಸೃಷ್ಟಿಗೆ ಆದ್ಯತೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 4:21 IST
Last Updated 5 ಜೂನ್ 2019, 4:21 IST
ನಿರ್ಮಲಾ
ನಿರ್ಮಲಾ   

ನವದೆಹಲಿ (ಪಿಟಿಐ): ಕೇಂದ್ರದಲ್ಲಿ ಮರಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರದ ಮೊದಲ ಬಜೆಟ್‌ ಸಿದ್ಧಪಡಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಹಣಕಾಸು ಸಚಿವಾಲಯದ ಸಿಬ್ಬಂದಿ ಬಜೆಟ್‌ ಸಿದ್ಧತೆಯಲ್ಲಿ ತೊಡಗಿರುವುದಿಂದ ನಾರ್ತ್‌ ಬ್ಲಾಕ್‌ಗೆ ಪತ್ರಕರ್ತರ ಮತ್ತು ಇತರರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ.

ಲೋಕಸಭೆ ಚುನಾವಣೆ ಮೊದಲು ಸೀಮಿತ ಅವಧಿಗೆ ಹಣ ವೆಚ್ಚ ಮಾಡಲು ಸರ್ಕಾರ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್‌ ಮಂಡಿಸಿತ್ತು. ಈಗ 2019–20ನೆ ಹಣಕಾಸು ವರ್ಷದ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲು ಸಿದ್ಧತೆಗಳು ನಡೆದಿವೆ.

ADVERTISEMENT

ದೇಶಿ ಆರ್ಥಿಕತೆಯು ಕಳೆದ ಐದು ವರ್ಷಗಳಲ್ಲಿ ತೀವ್ರ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೊದಲ ಬಾರಿಗೆ ಬಜೆಟ್‌ ಮಂಡಿಸಲಿದ್ದಾರೆ. ಬಜೆಟ್‌ ಸಿದ್ಧಪಡಿಸುವ ತಂಡದಲ್ಲಿ ಹಣಕಾಸು ರಾಜ್ಯ ಸಚಿವ ಅನುರಾಗ್‌ ಸಿಂಗ್‌ ಠಾಕೂರ್‌ ಮತ್ತು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಇದ್ದಾರೆ.

ಅಧಿಕಾರಿಗಳ ತಂಡದ ನೇತೃತ್ವವನ್ನು ಹಣಕಾಸು ಕಾರ್ಯದರ್ಶಿ ಸುಭಾಷ್‌ಚಂದ್ರ ಗರ್ಗ್‌, ವೆಚ್ಚ ಕಾರ್ಯದರ್ಶಿ ಗಿರೀಶ್‌ ಚಂದ್ರ ಮುರ್ಮು, ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ, ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ವಹಿಸಿಕೊಂಡಿದ್ದಾರೆ.

ಬಜೆಟ್‌ ಸಿದ್ಧತೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಗೋಪ್ಯವಾಗಿಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾ
ಗಿದೆ. ನಾರ್ತ್‌ ಬ್ಲಾಕ್‌ ಸುತ್ತ ಸರ್ಪಗಾವಲು ಒದಗಿಸಲಾಗಿದೆ. ಸಚಿವಾಲಯದಲ್ಲಿನ ಖಾಸಗಿ ಇ–ಮೇಲ್‌ಗಳನ್ನು ಸ್ಥಗಿತಗೊಳಿಸ
ಲಾಗಿದೆ. ಬಜೆಟ್‌ ಸಿದ್ಧತೆಯಲ್ಲಿ ತೊಡಗಿರುವ ಅಧಿಕಾರಿಗಳ ಕೋಣೆಗೆ ಹೋಗಿ ಬರುವವರ ಮೇಲೆ ನಿಗಾ ಇರಿಸಲಾಗಿದೆ.

ಕುಂಠಿತ ಆರ್ಥಿಕತೆ, ವಸೂಲಾಗದ ಸಾಲ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ಹಣಕಾಸು ಮುಗ್ಗಟ್ಟು, ಉದ್ಯೋಗ ಸೃಷ್ಟಿ, ಖಾಸಗಿ ಹೂಡಿಕೆ, ರಫ್ತು ಪುನಶ್ಚೇತನ, ಕೃಷಿ ಕ್ಷೇತ್ರದಲ್ಲಿನ ಸಂಕಷ್ಟ ಪರಿಸ್ಥಿತಿ, ವಿತ್ತೀಯ ವಿವೇಕದ ಜತೆ ರಾಜಿ ಮಾಡಿಕೊಳ್ಳದೆ ಸರ್ಕಾರಿ ಬಂಡವಾಳ ಹೂಡಿಕೆ ಹೆಚ್ಚಿಸುವ ಕ್ರಮಗಳ ಬಗ್ಗೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಗಮನ ನೀಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.