ನವದಹೆಲಿ: ಕನಸಿನ ಕಂಪನಿ ಅಥವಾ ಹೊಸ ಸ್ಟಾರ್ಟ್ಅಪ್ ಪ್ರಾರಂಭಿಸಲು ಹಂಬಲಿಸುವ ಯುವಕರು ಮೊದಲು ತಮ್ಮ ಕೆಲಸದ ಮೇಲಿನ ಬದ್ಧತೆ, ಪರಿಶ್ರಮ ಹಾಗೂ ಒತ್ತಡ ನಿರ್ವಹಣೆಯೊಂದಿಗೆ ಯಾವುದೇ ವಿಷಯಕ್ಕೂ ವಿಚಲಿತರಾಗದಂತೆ ಗುರಿ ಸಾಧಿಸುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಆಹಾರ ಡೆಲಿವರಿ ಕಂಪನಿ ಜೊಮ್ಯಾಟೊ ಸ್ಥಾಪಕ ದೀಪಿಂದರ್ ಗೋಯಲ್ ಕಿವಿ ಮಾತು ಹೇಳಿದ್ದಾರೆ.
ಸ್ಟಾರ್ಟ್ಅಪ್ ಮಹಾಕುಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ಸಾಹದಿಂದ ಹಾಗೂ ಒಳ್ಳೆಯ ಉದ್ದೇಶದೊಂದಿಗೆ ತಮ್ಮ ಕನಸಿನ ಕಂಪನಿಯನ್ನು ಮುನ್ನಡೆಸಬೇಕೆ ಹೊರತು ಕೇವಲ ಹಣ ಗಳಿಸುವ ಗುರಿಯೊಂದಿಗೆ ಯಾವುದೇ ಕಂಪನಿಯನ್ನು ಸ್ಥಾಪಿಸಬಾರದು, ಇಂತಹ ಬೆಳವಣಿಗೆ ಕಂಪನಿಯ ಯಶಸ್ವಿಗೆ ಕಾರಣವಾಗುವುದಿಲ್ಲ ಎಂದರು.
ಜೊಮ್ಯಾಟೊ ಕಂಪನಿ ಆರಂಭ ಮಾಡುವಾಗ ಎದುರಾದ ಸಮಸ್ಯೆಗಳ ಬಗ್ಗೆ ಹಾಗೂ ನಿರ್ದಿಷ್ಟ ಗುರಿ ಸಾಧಿಸುವುದರ ಕುರಿತು ಗೋಯಲ್ ಅಭಿಪ್ರಾಯ ಹಂಚಿಕೊಂಡರು.
‘ನಾನು ಅನೇಕ ಹೊಸ ಉದ್ಯಮಿಗಳನ್ನು ನೋಡಿದ್ದೇನೆ. ಅವರೊಂದಿಗೆ ಸಮಲೋಚನೆಯನ್ನೂ ಮಾಡಿದ್ದೇನೆ. ನೀವು ಏಕೆ ಕಂಪನಿಯನ್ನು ಸ್ಥಾಪಿಸಿದ್ದೀರಿ ಎಂದು ಕೇಳಿದಾಗ ಬಹಳಷ್ಟು ಜನ ನೀಡುವ ಉತ್ತರ ಹಣ ಗಳಿಸುವುದು ಎಂಬುದ್ದಾಗಿದೆ. ಆದರೆ ಹೀಗೆ ಕೇವಲ ಲಾಭ ಸಂಪಾದನೆ ಒಂದೇ ಉದ್ದೇಶದಿಂದ ಕಂಪನಿಯನ್ನು ಪ್ರಾರಂಭಿಸಿದರೆ ಮುಂದೊಂದು ದಿನ ಕಂಪನಿಯ ಕೆಟ್ಟ ಆಡಳಿತಕ್ಕೆ ಕಾರಣವಾಗುತ್ತದೆ’ ಎಂದು ಗೋಯಲ್ ಎಚ್ಚರಿಕೆ ನೀಡಿದರು.
ಉದ್ಯಮವು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ರೀತಿಯಲ್ಲಿ ನೋಡಿಕೊಳ್ಳಬೇಕು. ಯಾವುದೇ ವ್ಯಾಪಾರ– ವ್ಯವಹಾರವು ನಾವೀನ್ಯತೆ ಇಲ್ಲದೆ ಹೋದರೆ ಕಂಪನಿಗಳು ಹೆಚ್ಚು ಕಾಲ ಉಳಿದುಕೊಳ್ಳುವುದಿಲ್ಲ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.