ನವದೆಹಲಿ: ಕೋವಿಡ್ ನಿಯಂತ್ರಿಸಲು ಜಾರಿಗೊಳಿಸಿರುವ ನಿರ್ಬಂಧಗಳಿಂದಾಗಿ ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಕಚ್ಚಾ ಸಾಮಗ್ರಿಗಳ ವೆಚ್ಚ ಹೆಚ್ಚಾಗುತ್ತಿದೆ, ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಪಿಎಚ್ಡಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಪಿಎಚ್ಡಿಸಿಸಿಐ) ಹೇಳಿದೆ.
ಕೋವಿಡ್ನ ಎರಡನೇ ಅಲೆಯ ದುಷ್ಪರಿಣಾಮಕ್ಕೆ ತುತ್ತಾಗಿರುವ ದೇಶದ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರಲು ಹೆಚ್ಚಿನ ಉತ್ತೇಜನ ಕ್ರಮದ ಅಗತ್ಯವಿದೆ ಎಂದುಪಿಎಚ್ಡಿಸಿಸಿಐ ನಡೆಸಿರುವ ಸಮೀಕ್ಷೆಯ ವರದಿಯಲ್ಲಿ ಹೇಳಲಾಗಿದೆ.
ಕಚ್ಚಾ ಸರಕುಗಳ ವೆಚ್ಚ ಹೆಚ್ಚಳದಿಂದ ಸಂಕಷ್ಟ ಆಗಿರುವುದಾಗಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಲ್ಲಿ ಶೇಕಡ 73ರಷ್ಟು ಮಂದಿ ಹೇಳಿದ್ದಾರೆ. ದೇಶದ ಹಲವು ಭಾಗಗಳಲ್ಲಿ ನಿರ್ಬಂಧಗಳು ಇರುವುದರಿಂದ ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಉಂಟಾಗಿದೆ. ಪೂರೈಕೆ ವ್ಯವಸ್ಥೆಗೆ ಅಡ್ಡಿಯಾಗಿದ್ದು, ಬೇಡಿಕೆಯನ್ನು ತಗ್ಗಿಸಿದೆ ಎಂದು ಅದು ವಿವರಿಸಿದೆ.
ದುಡಿಯುವ ಬಂಡವಾಳದ ಕೊರತೆ, ದರ–ವೆಚ್ಚ ನಿಯಂತ್ರಣ, ವೇತನ ಪಾವತಿ, ಸಾಲ ಮರುಪಾವತಿಯಂತಹ ಸಮಸ್ಯೆಗಳನ್ನೂ ಉದ್ಯಮಗಳು ಎದುರಿಸುತ್ತಿವೆ.
ಕೋವಿಡ್ ನಿಯಂತ್ರಿಸಲು ಕಚೇರಿಗಳು ಮತ್ತು ಅಂಗಡಿಗಳನ್ನು ಮುಚ್ಚಿರುವುದರಿಂದ ಆರ್ಥಿಕ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ ಎಂದು ಪಿಎಚ್ಡಿಸಿಸಿಐನ ಅಧ್ಯಕ್ಷ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.