ನವದೆಹಲಿ: ಬ್ಯಾಂಕ್ಗಳಲ್ಲಿ ಹಣ ಠೇವಣಿ ಇರಿಸುವವರಿಗೆ ಹೆಚ್ಚಿನ ನೆರವು ನೀಡುವ ಉದ್ದೇಶದಿಂದ ‘ಠೇವಣಿ ವಿಮೆ ಮತ್ತು ಸಾಲ ಖಾತರಿ ಕಾರ್ಪೊರೇಷನ್ ಕಾಯ್ದೆ’ಗೆ (ಡಿಐಸಿಜಿಸಿ ಕಾಯ್ದೆ) ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ತಿದ್ದುಪಡಿಯು ಕಾಯ್ದೆಯ ಭಾಗವಾದ ನಂತರ, ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ ವಿಧಿಸಿದರೆ ಠೇವಣಿದಾರರಿಗೆ 90 ದಿನಗಳಲ್ಲಿ ₹ 5 ಲಕ್ಷದವರೆಗೆ ವಿಮಾ ಪರಿಹಾರ ಮೊತ್ತ ಸಿಗಲಿದೆ.
ಬ್ಯಾಂಕ್ ಠೇವಣಿದಾರರಿಗೆ ಹೆಚ್ಚಿನ ವಿಮಾ ಪರಿಹಾರ ಮೊತ್ತ ಕೊಡಿಸಲು ಈ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.
ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಹಾಲಿ ಅಧಿವೇಶನದಲ್ಲೇ ಮಂಡಿಸುವ ಸಾಧ್ಯತೆ ಇದೆ ಎಂದು ನಿರ್ಮಲಾ ಅವರು ತಿಳಿಸಿದರು. ಇದು ಕಾಯ್ದೆಯಾದ ನಂತರ, ಪಿಎಂಸಿ ಬ್ಯಾಂಕ್ ಹಾಗೂ ಅದರಂತಹ ಇತರ ಬ್ಯಾಂಕ್ಗಳಲ್ಲಿ ಠೇವಣಿ ಇರಿಸಿದವರಿಗೆ ನೆರವು ಸಿಗಲಿದೆ. ಈಗಿರುವ ನಿಯಮಗಳ ಅನ್ವಯ, ಬ್ಯಾಂಕ್ನ ಪರವಾನಗಿ ರದ್ದಾಗಿ, ಬ್ಯಾಂಕಿಂಗ್ ಕಂಪನಿಯನ್ನು ಪರಿಸಮಾಪ್ತಿಗೊಳಿಸಿ, ಅದರ ಆಸ್ತಿಗಳನ್ನು ಹಕ್ಕುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ಶುರುವಾದ ನಂತರ ವಿಮಾ ಪರಿಹಾರ ಮೊತ್ತವು ಸಿಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.